ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಮೇಲ್ಸೇತುವೆಗಳ ತ್ವರಿತ ಅಭಿವೃದ್ಧಿ ಮತ್ತು ನಿರ್ಮಾಣದ ಹೊರತಾಗಿಯೂ ಮಾಲಿನ್ಯದ ಮಟ್ಟ ಕಡಿಮೆಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 2016 ರ ಅಂಕಿಅಂಶಗಳಿಗೆ ಹೋಲಿಸಿದರೆ 2022 ರಲ್ಲಿ ಮಾಲಿನ್ಯದ ಪಿಎಂ 2.5 ಮತ್ತು ಪಿಎಂ 10 ಮಾಲಿನ್ಯದ ಮಟ್ಟಗಳು ಶೇಕಡಾ 30 ರಷ್ಟು ಕುಸಿದಿರುವುದಾಗಿ ತಿಳಿಸಿದರು.
ಅಭಿವೃದ್ಧಿಯಾದಾಗಲೆಲ್ಲ, ಮರಗಳನ್ನು ಕಡಿಯುವುದು, ರಸ್ತೆ ನಿರ್ಮಾಣ, ಧೂಳು ಮುಂತಾದವುಗಳಿಂದ ಮಾಲಿನ್ಯ ಇದ್ದೇ ಇರುತ್ತದೆ. ಕಳೆದ ಎಂಟು ವರ್ಷಗಳಲ್ಲಿ ದೆಹಲಿಯಲ್ಲಿ ಅಭಿವೃದ್ಧಿ ವೇಗ ಕಡಿಮೆಯಾಗಿಲ್ಲ. ಶಾಲೆಗಳು, ಆಸ್ಪತ್ರೆಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಅಭಿವೃದ್ಧಿಯ ಕೆಲಸಗಳು ತ್ವರಿತ ಗತಿಯಲ್ಲಿ ನಡೆದಿವೆ. ಆದರೆ, ಈ ಅವಧಿಯಲ್ಲಿ ಮಾಲಿನ್ಯ ಪ್ರಮಾಣ ತಗ್ಗಿದೆ ಎಂದರು.
ನಗರದಲ್ಲಿ 2013 ರಲ್ಲಿ ಶೇಕಡಾ 20 ರಷ್ಟು ಮರಗಳನ್ನು ಹೊಂದಿರುವ ಪ್ರದೇಶವಿತ್ತು. ಅದು ಈಗ ಇಂದು ಶೇಕಡಾ 23 ಕ್ಕೆ ಏರಿದೆ ಎಂದು ಅವರು ಮುಖ್ಯಮಂತ್ರಿ ಹೇಳಿದರು. ಈ ಮಧ್ಯೆ ವಿಪಕ್ಷ ನಾಯಕ ರಾಮ್ವೀರ್ ಸಿಂಗ್ ಬಿಧುರಿ ಅವರು ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಕಡಿಮೆಯಾಗಿದೆ ಎಂದು ಕೇಜ್ರಿವಾಲ್ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.
Advertisement