ತಿರುಪುರ್: ಫೇಸ್ಬುಕ್ನಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿ, ವಲಸೆ ಕಾರ್ಮಿಕರ ಬಗ್ಗೆ ವದಂತಿಗಳನ್ನು ಹರಡಿದ್ದಕ್ಕಾಗಿ ಜಾರ್ಖಂಡ್ ನಲ್ಲಿ ನೆಲೆಸಿದ್ದ 32 ವರ್ಷದ ಬಿಹಾರದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಉತ್ತರ ಭಾರತೀಯ ವಲಸಿಗರ ಮೇಲೆ ಹಲ್ಲೆ ನಡೆಸುತ್ತಿರುವಂತಹ ವಿಡಿಯೋ ಫೋಸ್ಟ್ ಮಾಡಿದ್ದಕ್ಕಾಗಿ ಜಾರ್ಖಂಡ್ನ ಲತೇಹರ್ ಜಿಲ್ಲೆಯ ಹೆನೆಗರೆ ಗ್ರಾಮದಲ್ಲಿ ನೆಲೆಸಿದ್ದ ಆರೋಪಿ ಪ್ರಶಾಂತ್ ಕುಮಾರ್ ನನ್ನು ತಿರುಪುರ್ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ಪತ್ತೆ ಹಚ್ಚಿ, ನಿನ್ನೆ ಬಂಧಿಸಿದ್ದು, ಲತೇಹಾರ್ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿತು ಎಂದು ಅವರು ಹೇಳಿದ್ದಾರೆ.
ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ತಿರುಪುರಕ್ಕೆ ಕರೆತಂದು 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವದಂತಿಗಳನ್ನು ಹಬ್ಬಿಸಿದ್ದಕ್ಕಾಗಿ ಬಿಹಾರದ ಯುವಕನನ್ನು ತಿರುಪುರ್ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಸಂಬಂಧ ಈ ಹಿಂದೆ ತಮಿಳುನಾಡು ಪೊಲೀಸರು 11 ಪ್ರಕರಣಗಳನ್ನು ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.
ಎಲ್ಲಾ ವಲಸೆ ಕಾರ್ಮಿಕರು ರಾಜ್ಯದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಬಿಹಾರದ ಸಿಎಂ ನಿತೀಶ್ ಕುಮಾರ್ ಅವರಿಗೆ ಭರವಸೆ ನೀಡಿದ್ದರು. ಭಯವನ್ನು ಹರಡುವ ವದಂತಿಗಳನ್ನು ಹರಡುವವರ ವಿರುದ್ಧ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದರು.
Advertisement