ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

2022ರಲ್ಲಿ ವಿಶ್ವಾಸಮತ ಸಾಬೀತಿಗೆ ಮಹಾ ರಾಜ್ಯಪಾಲರ ಆದೇಶ ರದ್ದು ಕೋರಿ ಸುಪ್ರೀಂಗೆ ಠಾಕ್ರೆ ಬಣ ಮನವಿ

2022ರ ಜೂನ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರದ ಅಂದಿನ ರಾಜ್ಯಪಾಲ ಬಿಎಸ್ ಕೊಶ್ಯಾರಿ ಅವರು ನೀಡಿದ್ದ ಆದೇಶ ರದ್ದುಗೊಳಿಸುವಂತೆ...

ನವದೆಹಲಿ: 2022ರ ಜೂನ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರದ ಅಂದಿನ ರಾಜ್ಯಪಾಲ ಬಿಎಸ್ ಕೊಶ್ಯಾರಿ ಅವರು ನೀಡಿದ್ದ ಆದೇಶ ರದ್ದುಗೊಳಿಸುವಂತೆ ಶಿವಸೇನೆಯ ಠಾಕ್ರೆ ಬಣ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದು, ಇದು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಲಿದೆ ಎಂದು ಹೇಳಿದೆ.

ಠಾಕ್ರೆ ಬಣವನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ರಾಜ್ಯಪಾಲರ ಆದೇಶ ರದ್ದುಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಒತ್ತಾಯಿಸಿದರು.

ಕೇವಲ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದ ಕೋಶ್ಯಾರಿ ಅವರ ನಡೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು ಎಂದು ಸುಪ್ರೀಂ ಕೋರ್ಟ್ ಕೋರ್ಟ್ ನಿನ್ನೆ ಹೇಳಿತ್ತು. ಹೀಗಾಗಿ ಇಂದು ರಾಜ್ಯಪಾಲರ ಆದೇಶ ರದ್ದುಗೊಳಿಸುವಂತೆ ಠಾಕ್ರೆ ಬಣ ಕೋರಿದೆ.

ಆಡಳಿತ ಪಕ್ಷದಲ್ಲಿನ ಶಾಸಕರ ಭಿನ್ನಾಭಿಪ್ರಾಯವನ್ನೇ ಆಧರಿಸಿ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಸೂಚಿಸುವುದು ತಪ್ಪು. ಇದು ಚುನಾಯಿತ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ. ಇಂಥ ನಿರ್ಣಯಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಉದ್ಧವ್‌ ಬಣದ ಪರ ವಕೀಲರಾದ ಕಪಿಲ್‌ ಸಿಬಲ್‌, ಅಭಿಷೇಕ್‌ ಮನು ಸಿಂಘ್ವಿ, ದೇವದತ್ತ ಕಾಮತ್‌, ಅಮಿತ್‌ ಆನಂದ್‌ ತಿವಾರಿ ಹಾಗೂ ಶಿಂದೆ ಬಣದ ಪರ ವಕೀಲರಾದ ನೀರಜ್‌ ಕಿಶನ್‌ ಕೌಲ್‌, ಹರೀಶ್‌ ಸಾಳ್ವೆ, ಮಹೇಶ್‌ ಜೇಠ್ಮಲಾನಿ, ಅಭಿಕಲ್ಪ್‌ ಪ್ರತಾಪ್‌ ಸಿಂಗ್‌ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠದ ಎದುರು ತಮ್ಮ ವಾದಗಳನ್ನು  ಮಂಡಿಸಿದರು.

ವಾದ - ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com