ಬಿಲ್ಕಿಸ್ ಬಾನೊ ಪ್ರಕರಣ: ಪ್ರಸ್ತುತ ಪೀಠದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳ ಪ್ರಯತ್ನ- ಸುಪ್ರೀಂ ಕೋರ್ಟ್
ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳ ಪರ ವಕೀಲರು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ಪೀಠದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆರೋಪಿಸಿದೆ.
Published: 02nd May 2023 11:59 PM | Last Updated: 03rd May 2023 02:54 PM | A+A A-

ಬಿಲ್ಕಿಸ್ ಬಾನೊ
ನವದೆಹಲಿ: ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳ ಪರ ವಕೀಲರು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ಪೀಠದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆರೋಪಿಸಿದೆ.
ಅಪರಾಧಿಗಳ ಪರ ವಕೀಲರು ತಮ್ಮ ಅಫಿಡವಿಟ್ ಪ್ರತಿ ಸಲ್ಲಿಸಲು ಮುಂದೂಡುವಂತೆ ಕೋರಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದು, ಅರ್ಜಿದಾರರ ಪರ ವಕೀಲರು ಆರೋಪಿಸಿದಂತೆ ನೋಟಿಸ್ ಸೇವೆಯನ್ನು ಪೂರ್ಣಗೊಳಿಸಲಾಗಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.
"ಈ ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಜೋಸೆಫ್ ಅವರು ಶೀಘ್ರದಲ್ಲೇ ನಿವೃತ್ತರಾಗಲಿರುವ ಕಾರಣ, ಪ್ರಸ್ತುತ ಪೀಠದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳ ಪರ ವಕೀಲರು ನಡೆಸಿದ ಪ್ರಯತ್ನವು ಸ್ಪಷ್ಟವಾಗಿದೆ ಎಂದು ಪೀಠವು ಹೇಳಿರುವುದಾಗಿ ಕಾನೂನು ಸುದ್ದಿ ಸಂಸ್ಥೆಯೊಂದು ಹೇಳಿದೆ.
'ನಾನು ಜೂನ್ 16 ರಂದು ನಿವೃತ್ತಿ ಹೊಂದುತ್ತಿದ್ದೇನೆ. ಮೇ 19 ರಂದು ನನ್ನ ಕೊನೆಯ ಕೆಲಸದ ದಿನವಾಗಿದೆ. ಆದ್ದರಿಂದ ಈ ಪೀಠದಿಂದ ಪ್ರಕರಣದ ವಿಚಾರಣೆ ನಡೆಯಬಾರದು ಎಂದು ಬಯಸುತ್ತಿದ್ದೀರಾ. ನೀವು (ವಕೀಲರು) ಕೋರ್ಟಿನ ಅಧಿಕಾರಿಗಳು, ಪಾತ್ರವನ್ನು ಮರೆಯಬಾರದು. ಪ್ರಕರಣವನ್ನು ಗೆಲ್ಲಬಹುದು ಅಥವಾ ಸೋಲಬಹುದು ಆದರೆ ನಿಮ್ಮ ಕರ್ತವ್ಯವನ್ನು ಮರೆಯಬೇಡಿ ಎಂದು ನ್ಯಾಯಮೂರ್ತಿ ಜೋಸೆಫ್ ಟೀಕಿಸಿದ್ದಾರೆ.
2002ರ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಈ ಪೀಠವು ವಿಚಾರಣೆ ನಡೆಸುತ್ತಿದೆ.