ಟೀ ಅಂಗಡಿಯಿಂದ 1,200 ರೂಪಾಯಿ ಕದ್ದ ವ್ಯಕ್ತಿ, 20,000 ರೂಪಾಯಿ ಬಾಂಡ್ ಮೇಲೆ ಆರೋಪಿಗೆ ಜಾಮೀನು
ಟೀ ಅಂಗಡಿಯ ಬೀಗ ಮುರಿದು 1200 ರೂ.ಗಳನ್ನು ಕದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಯೊಬ್ಬನಿಗೆ ದೆಹಲಿ ನ್ಯಾಯಾಲಯವು 20,000 ರೂ.ಗಳ ವೈಯಕ್ತಿಕ ಬಾಂಡ್ನೊಂದಿಗೆ ಇದೇ ಮೊತ್ತದ ಓರ್ವನ ಶ್ಯೂರಿಟಿಯ ಮೇಲೆ ಜಾಮೀನು ನೀಡಿತು.
Published: 02nd May 2023 07:31 AM | Last Updated: 02nd May 2023 07:31 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಟೀ ಅಂಗಡಿ ಬೀಗ ಮುರಿದು 1200 ರೂ.ಗಳನ್ನು ಕದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಯೊಬ್ಬನಿಗೆ ದೆಹಲಿ ನ್ಯಾಯಾಲಯವು 20,000 ರೂ.ಗಳ ವೈಯಕ್ತಿಕ ಬಾಂಡ್ನೊಂದಿಗೆ ಇದೇ ಮೊತ್ತದ ಓರ್ವನ ಶ್ಯೂರಿಟಿಯ ಮೇಲೆ ಜಾಮೀನು ನೀಡಿತು.
'ಆರೋಪಗಳ ಸತ್ಯಾಸತ್ಯತೆ ಮತ್ತು ಆರೋಪಿಗಳ ಒಳಗೊಳ್ಳುವಿಕೆಯನ್ನು ವಿಚಾರಣೆಯ ಸಮಯದಲ್ಲಿ ಚೆನ್ನಾಗಿ ಪರಿಶೀಲಿಸಲಾಗುತ್ತದೆ. ಶಿಕ್ಷೆಯ ವಿಷಯವಾಗಿ ಆರೋಪಿಗಳಿಗೆ ಜಾಮೀನು ನಿರಾಕರಿಸುವಂತಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಇತ್ತೀಚಿನ ಆದೇಶದಲ್ಲಿ ತಿಳಿಸಿದ್ದಾರೆ.
ಜನವರಿ 18-19ರ ಮಧ್ಯರಾತ್ರಿ ರವಿ ಎಂಬಾತ ಅನಿಲ್ ರೈ, ಸಂಜಯ್ ಠಾಕೂರ್ ಮತ್ತು ಸಾಗರ್ ಎಂಬುವರೊಂದಿಗೆ ಸೇರಿ ದೂರುದಾರ ಓಂ ಪ್ರಕಾಶ್ ಅವರ ಟೀ ಅಂಗಡಿಯ ಬೀಗ ಮುರಿದು 1200 ರೂ. ಕದ್ದಿದ್ದಾರೆ. ಈ ವೇಳೆ ಸ್ಥಳದಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಎಸ್ಐ ಸುಶೀಲ್ ಕುಮಾರ್ ವರದಿಯಲ್ಲಿ ತಿಳಿಸಿದ್ದಾರೆ.
ನರೈನಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 457, 380 (ಕಳ್ಳತನ), 411 ಮತ್ತು 34 (ಅಪರಾಧ ಕೃತ್ಯವನ್ನು ಹಲವಾರು ವ್ಯಕ್ತಿಗಳು ಮಾಡಿರುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜನವರಿ 19 ರಿಂದ ತನ್ನ ಕಕ್ಷಿದಾರ ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ತನಿಖೆಯ ಅಗತ್ಯವಿಲ್ಲ ಎಂದು ಆರೋಪಿ ರವಿ ಪರ ವಾದ ಮಂಡಿಸಿದ ವಕೀಲ ಪುರಣ್ ಚಂದ್ ಅವರ ವಾದವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು. ಪ್ರಕರಣದ ಆರೋಪ ಪಟ್ಟಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದರು.
ಅದರಂತೆ, ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪಿಯು ದೇಶವನ್ನು ತೊರೆಯಬಾರದು, ಆರೋಪಿಯು ಸಾಕ್ಷ್ಯವನ್ನು ಹಾಳುಮಾಡಬಾರದು, ಆರೋಪಿಯು ಪ್ರತಿ ವಿಚಾರಣೆಯಲ್ಲಿಯೂ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಆರೋಪಿಗೆ ರವಿಗೆ ಜಾಮೀನು ನೀಡಲಾಗಿದೆ.