ಅಜ್ಜಿ ಹಾದಿಯಲ್ಲಿ ಮೊಮ್ಮಗಳು: ಪ್ರಿಯಾಂಕಾ ಗಾಂಧಿ ತೆಲಂಗಾಣದಿಂದ ಚುನಾವಣಾ ಕಣಕ್ಕೆ ಎಂಟ್ರಿ ಸಾಧ್ಯತೆ

ತೆಲಂಗಾಣ ರಾಜಕೀಯ ಮತ್ತು ಕಾಂಗ್ರೆಸ್‌ನ ಆಂತರಿಕ ಚಲನವಲನದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಬಹುದು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮುಂದಿನ ವರ್ಷ...
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ಹೈದರಾಬಾದ್: ತೆಲಂಗಾಣ ರಾಜಕೀಯ ಮತ್ತು ಕಾಂಗ್ರೆಸ್‌ನ ಆಂತರಿಕ ಚಲನವಲನದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಬಹುದು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮೆದಕ್ ಅಥವಾ ಮಹೆಬೂಬ್‌ನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಆಲೋಚನೆಯನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿದುಬಂದಿದೆ.

ಅಜ್ಜಿ ಹಾದಿಯಲ್ಲಿ ಮೊಮ್ಮಗಳು
ಕಾಂಗ್ರೆಸ್ ಹೈಕಮಾಂಡ್ ಪ್ರಿಯಾಂಕಾ ಗಾಂಧಿ ಉಮೇದುವಾರಿಕೆಯನ್ನು ಅಂತಿಮಗೊಳಿಸಿದರೆ, ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯ ಪ್ರವೇಶಿಸಲಿದ್ದಾರೆ. ಈ ಮೂಲಕ 1980 ರಲ್ಲಿ ಮೆದಕ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅಜ್ಜಿ ಇಂದಿರಾ ಗಾಂಧಿಯವರ ಹಾದಿಯಲ್ಲಿ ಪ್ರಿಯಾಂಕಾ ಸಾಗಲಿದ್ದಾರೆ. ತುರ್ತು ಪರಿಸ್ಥಿತಿಯ ನಂತರ ನಡೆದ 1980ರ ಲೋಕಸಭೆ ಚುನಾವಣೆ ಇಂದಿರಾ ಗಾಂಧಿ ಅವರಿಗೆ ಅತ್ಯಂತ ನಿರ್ಣಾಯಕವಾಗಿತ್ತು.

ಅಜ್ಜಿ ಸ್ಪರ್ಧಿಸಿದ್ದ ಕ್ಷೇತ್ರ ಎಂಬ ಕಾರಣಕ್ಕೆ ಪ್ರಿಯಾಂಕಾ ಅವರು ಮೇದಕ್‌ನಿಂದ ಸ್ಪರ್ಧಿಸುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. "ಜನರು ಇಂದಿರಾ ಗಾಂಧಿಯ ಬಗ್ಗೆ ಒಲವು ಹೊಂದಿದ್ದರು ಮತ್ತು ಅವರು ಮರಳಿ ಅಧಿಕಾರ ಪಡೆಯಲು ಸಹಾಯ ಮಾಡಿದರು. ಪ್ರಿಯಾಂಕಾಗೆ ನಿಕಟವಾಗಿರುವ ಕೆಲವು ಪ್ರಮುಖ ನಾಯಕರು ಮೇದಕ್‌ನಿಂದ ಸ್ಪರ್ಧಿಸುವ ಬಗ್ಗೆ ಹಲವಾರು ಬಾರಿ ಅವರೊಂದಿಗೆ ಚರ್ಚಿಸಿದ್ದಾರೆ” ಎಂದು ಪಕ್ಷದ ಉನ್ನತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಖಚಿತಪಡಿಸಿವೆ.

ಮಹೆಬೂಬ್‌ನಗರ ಸಹ ಎಐಸಿಸಿ ಪರಿಗಣನೆಯಲ್ಲಿದೆ
ಕಾಂಗ್ರೆಸ್ ಹೈಕಮಾಂಡ್ ಪ್ರಿಯಾಂಕಾ ಗಾಂಧಿಗಾಗಿ ಮಹೆಬೂಬ್‌ನಗರವನ್ನು ಸಹ ಪರಿಗಣಿಸುತ್ತಿದೆ. ಬಿಆರ್‌ಎಸ್ ವರಿಷ್ಠ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು 2009 ರಲ್ಲಿ ಮಹಬೂಬ್‌ನಗರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತರುವಾಯ, ಅವರು ಲೋಕಸಭೆಗೆ ರಾಜೀನಾಮೆ ನೀಡಿದರು. ನಂತರ ಬಿಆರ್ ಎಸ್ ನಾಯಕ ಕೆ ಪ್ರಭಾಕರ ರೆಡ್ಡಿ ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಮೇದಕ್‌ನಿಂದ ಚುನಾಯಿತರಾದರು ಮತ್ತು ನಂತರ 2019 ರಲ್ಲೂ ಮರು ಆಯ್ಕೆಯಾದರು.

ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ
2024ರ ಸಾರ್ವತ್ರಿಕ ಚುನಾವಣೆಗೆ ಕೆಲವು ತಿಂಗಳುಗಳ ಮುನ್ನ ಅಂದರೆ ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ಎದುರಿಸಲಿದೆ. ಈ ವಿಧಾನಸಭೆ ಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

“ಕಾಂಗ್ರೆಸ್ ತೆಲಂಗಾಣವನ್ನು ಗೆದ್ದರೆ, ಅದು ಪ್ರಿಯಾಂಕಾ ಗೆಲುವಿಗೆ ಸುಲಭವಾಗಬಹುದು. ಪರ್ಯಾಯವಾಗಿ, ಪ್ರಿಯಾಂಕಾ ತೆಲಂಗಾಣದಿಂದ ಚುನಾವಣೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಘೋಷಿಸಿದರೆ ಮತದಾರರ ಚಿತ್ತ ಕಾಂಗ್ರೆಸ್ ಪರವಾಗಿ ವಾಲಬಹುದು. ಇದು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ಗೆ ಸಹಾಯ ಮಾಡುತ್ತದೆ ಎಂದು ಮೂಲಗಳು ಹೇಳುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com