ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಳ್ಳಿ ಹಾಕಿದ್ದು, ಅವರ ಬಿಜು ಜನತಾ ದಳ (ಬಿಜೆಡಿ) ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ನವೀನ್ ಪಟ್ನಾಯಕ್, ಇದನ್ನು ಸೌಜನ್ಯದ ಭೇಟಿ ಎಂದರು. ಬಿಜೆಡಿ ತನ್ನ ಸಮಾನವಾದ ನಿಲುವನ್ನು ಉಳಿಸಿಕೊಳ್ಳುತ್ತದೆಯೇ ಎಂದು ಪತ್ರಕರ್ತರು ಕೇಳಿದಾಗ ಇದು ಯಾವಾಗಲೂ ಇರುವ ಯೋಜನೆಯಾಗಿದೆ ಎಂದರು.
76 ವರ್ಷದ ಹಿರಿಯ ರಾಜಕಾರಣಿ ನವೀನ್ ಪಟ್ನಾಯಕ್ ಯಾವಾಗಲೂ ಎನ್ ಡಿಎ ಅಥವಾ ಕಾಂಗ್ರೆಸ್ ಯಾವುದೋ ಒಂದು ಪತ್ರಕ್ಕೆ ಬೆಂಬಲ ನೀಡುತ್ತಾರೆ. ಪ್ರಸ್ತುತ ಎನ್ ಡಿಗೆ ಬೆಂಬಲ ನೀಡುತ್ತಿರುವ ಅವರು, ತಮ್ಮ ನಿಲುವು ಶೀಘ್ರದಲ್ಲಿಯೇ ಬದಲಾಗುವುದಿಲ್ಲ ಎಂದು ಹೇಳಿದರು.
ನವೀನ್ ಪಟ್ನಾಯಕ್ ಅವರ ಘೋಷಣೆಯು 2024 ರ ಲೋಕಸಭಾ ಚುನಾವಣೆ ವೇಳೆಗೆ ದೇಶಾದ್ಯಂತ ಬಿಜೆಪಿ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸುವ ನಿತೀಶ್ ಕುಮಾರ್ ಅವರ ಪ್ರಯತ್ನಗಳಿಗೆ ಹೊಡೆತವಾಗಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭುವನೇಶ್ವರದಿಂದ ಪುರಿಗೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಲು ಮೋದಿಯನ್ನು ಭೇಟಿಯಾಗಿದ್ದು, ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಪಟ್ನಾಯಕ್ ತಿಳಿಸಿದರು.
ದೆಹಲಿ ಭೇಟಿ ಸಂದರ್ಭದಲ್ಲಿ ಬೇರೆ ಯಾವುದೇ ರಾಜಕೀಯ ಪಕ್ಷಗಳನ್ನು ಭೇಟಿ ಮಾಡುವ ಯೋಜನೆ ಇಲ್ಲ ಎಂದು ಅವರು ಹೇಳಿದರು. ಪಟ್ನಾಯಕ್ ಅವರು ಈ ಹಿಂದೆ ಬಿಜೆಪಿಯ ಕಟು ಟೀಕಾಕಾರರಲ್ಲಿ ಒಬ್ಬರಾದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು.
Advertisement