ಕೋಲ್ಕತ್ತಾ: ಶಾಲಾ ಶಿಕ್ಷಕರ ನೇಮಕಾತಿ ಹಗರಣದ ತನಿಖೆಯ ಭಾಗವಾಗಿ ಶನಿವಾರ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರನ್ನು ಸಿಬಿಐ ಅಧಿಕಾರಿಗಳು 9 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಬಳಿಕ ಸಿಬಿಐ ಕಚೇರಿಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಈ ವಿಚಾರಣೆಯು ತನಗೆ ಮತ್ತು ಸಿಬಿಐ ಅಧಿಕಾರಿಗಳಿಗೆ ಸಮಯ ವ್ಯರ್ಥ, ಆದರೆ ಅವರು "ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ" ಎಂದು ಹೇಳಿದರು.
"ನನ್ನನ್ನು ಸಿಬಿಐ ಒಂಬತ್ತುವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು. ಈ ವಿಚಾರಣೆ ಅವರಿಗೆ(ಸಿಬಿಐ ಅಧಿಕಾರಿಗಳು) ಮತ್ತು ನನಗೆ ಸಮಯ ವ್ಯರ್ಥವಾಯಿತು" ಎಂದು ಸಿಬಿಐ ಕಚೇರಿಯಿಂದ ಹೊರಬಂದ ನಂತರ ಬ್ಯಾನರ್ಜಿ ಹೇಳಿದ್ದಾರೆ.
"ದೆಹಲಿಯ ಮೇಲಧಿಕಾರಿಗಳ ಸೂಚನೆಯಂತೆ ನನ್ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅನಗತ್ಯವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ" ಎಂದು ಟಿಎಂಸಿ ನಾಯಕ ಆರೋಪಿಸಿದ್ದಾರೆ.
Advertisement