ಇತ್ತೀಚೆಗಷ್ಟೇ ಹಿಂಪಡೆದಿರುವ 2000 ರೂಪಾಯಿ ನೋಟುಗಳನ್ನು ಅಗತ್ಯ ನಮೂನೆ ಅಥವಾ ಗುರುತಿನ ಪುರಾವೆ ಇಲ್ಲದೆ ವಿನಿಮಯ ಮಾಡಿಕೊಡುತ್ತಿರುವುದನ್ನು ವಿರೋಧಿಸಿ ಇಂದು ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧಿಸೂಚನೆಗಳು ಅನಿಯಂತ್ರಿತ, ತರ್ಕಬದ್ಧವಲ್ಲದ ಮತ್ತು ಭಾರತದ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ವಕೀಲ ಅಶ್ವನಿ ಕುಮಾರ್ ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ನೋಟುಗಳು ಜನರ ಲಾಕರ್ಗಳನ್ನು ಸೇರಿವೆ ಅಥವಾ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಮಾದಕವಸ್ತು ಕಳ್ಳಸಾಗಣೆದಾರರು, ಗಣಿಗಾರಿಕೆ ಮಾಫಿಯಾ ಮತ್ತು ಭ್ರಷ್ಟರಿಂದ ಸಂಗ್ರಹಿಸಲ್ಪಟ್ಟಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮುಖಬೆಲೆಯ ನೋಟುಗಳ ನಗದು ವಹಿವಾಟು ಭ್ರಷ್ಟಾಚಾರದ ಮುಖ್ಯ ಮೂಲವಾಗಿದೆ ಮತ್ತು ಈ ನೋಟುಗಳನ್ನು ಭಯೋತ್ಪಾದನೆ, ನಕ್ಸಲಿಸಂ, ಪ್ರತ್ಯೇಕತಾವಾದ, ಮೂಲಭೂತವಾದ, ಜೂಜು, ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ, ಅಪಹರಣ, ಸುಲಿಗೆ, ಲಂಚ ಮತ್ತು ವರದಕ್ಷಿಣೆ ಇತ್ಯಾದಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ ಎಂದು ಅದು ಹೇಳಿದೆ. ಈ ಹಿನ್ನೆಲೆಯಲ್ಲಿ ಆರ್ಬಿಐ ಮತ್ತು ಎಸ್ಬಿಐ 2000 ರೂಪಾಯಿ ನೋಟುಗಳನ್ನು ಆಯಾ ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಜಮಾ ಮಾಡುವಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅರ್ಜಿಯಲ್ಲಿ ಪ್ರತಿ ಕುಟುಂಬವೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂದು ಕೇಂದ್ರವು ಇತ್ತೀಚೆಗೆ ಘೋಷಿಸಿತ್ತು. ಹಾಗಾದರೆ ಐಡಿ ಪ್ರೂಫ್ ಇಲ್ಲದೆ 2,000 ನೋಟುಗಳನ್ನು ಬದಲಾಯಿಸಿಕೊಳ್ಳಲು ಆರ್ಬಿಐ ಏಕೆ ಅನುಮತಿ ನೀಡುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ 80 ಕೋಟಿ ಕುಟುಂಬಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತವೆ ಎಂಬುದನ್ನೂ ಉಲ್ಲೇಖಿಸಬೇಕಾಗಿದೆ. ಆದ್ದರಿಂದ, 2,000 ರೂಪಾಯಿ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಠೇವಣಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರ್ಬಿಐ ಮತ್ತು ಎಸ್ಬಿಐಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Advertisement