ನವದೆಹಲಿ: ದೇವರೊಂದಿಗೆ ಚರ್ಚೆಗೆ ಕೂರಿಸಿದರೆ, ದೇವರನ್ನೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ಫ್ಯೂಸ್ ಮಾಡುತ್ತಾರೆಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಹೇಳಿಕೆ ಮೂಲಕ ರಾಹುಲ್ ಗಾಂಧಿಯವರು ದೇಶಕ್ಕೆ ಅವಮಾನ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.
ವಿದೇಶ ಪ್ರವಾಸದ ವೇಳೆ ರಾಹುಲ್ ಗಾಂಧಿ ಅವರು ಭಾರತವನ್ನು ಅವಮಾನಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ವಿದೇಶ ಪ್ರವಾಸದಲ್ಲಿ ವಿಶ್ವದ 24 ಪ್ರಧಾನಿಗಳು ಮತ್ತು ಅಧ್ಯಕ್ಷರನ್ನು ಭೇಟಿ ಮಾಡಿದ್ದರು. ಅಲ್ಲದೆ, 50 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದರು. ಆಸ್ಟ್ರೇಲಿಯಾದ ಪ್ರಧಾನಿ 'ಪಿಎಂ ಮೋದಿ ಬಾಸ್' ಎಂದು ಹೇಳಿದ್ದರು, ರಾಹುಲ್ ಗಾಂಧಿ ಅವರಿಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅಮೆರಿಕಾದ ಸ್ಯಾನ್ ಫ್ಲಾನ್ಸಿಸ್ಕೊದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ಮೋದಿಯವರನ್ನು ದೇವರೊಂದಿಗೆ ಚರ್ಚೆಗೆ ಕೂರಿಸಿದರೆ, ಬ್ರಹ್ಲಾಂಡ ಕಾರ್ಯನಿರ್ವಹಿಸುವ ಬಗ್ಗೆ ವಿವರಣೆ ನೀಡಿ, ದೇವರನ್ನೇ ಕನ್ಫ್ಯೂಸ್ ಮಾಡಿಬಿಡುತ್ತಾರೆ. ಬಿಜೆಪಿ ನಾಯಕರು ವಿಜ್ಞಾನಿಗಳಿಗೆ ವಿಜ್ಞಾನವನ್ನು ವಿವರಿಸುತ್ತಾರೆ. ಇತಿಹಾಸಕಾರರಿಗೆ ಇತಿಹಾಸವನ್ನು ವಿವರಿಸುತ್ತಾರೆ. ಅಲ್ಲದೆ, ಸೈನ್ಯ ಹಾಗೂ ವಾಯುಪಡೆಗೂ ಪಾಠ ಮಾಡಲು ಹೋಗುತ್ತಾರೆ. ಆದರೆ, ಅವರಿಗೆ ಅದ್ಯಾವುದರ ಬಗ್ಗೆಯೂ ತಿಳುವಳಿಕೆ ಇಲ್ಲ ಎಂದು ವ್ಯಂಗ್ಯವಾಡಿದ್ದರು.
Advertisement