ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪಕ್ಷಾತೀತವಾಗಿ ಇಷ್ಟವಾಗುತ್ತಿದ್ದ ರಾಜಕಾರಣಿ. ಭಾರತದ ಅತ್ಯುನ್ನದ ರಾಜಕೀಯ ನಾಯಕ. ಭಾರತ ರಾಜಕಾರಣದ ಭೀಷ್ಮ ಪಿತಾಮಹ ಎಂದು ಕರೆಯಲ್ಪಡುತ್ತಿದ್ದರು.
ತಂದೆಯ ಜೊತೆಗೆ ಕಾಲೇಜು ಅಧ್ಯಯನ. ಕಾನ್ಪುರದ ಡಿಎವಿ ಕಾಲೇಜಿನಲ್ಲಿ ತನ್ನ ತಂದೆಯ ಜೊತೆಗೆ ಒಂದೇ ತರಗತಿಯಲ್ಲಿ ಒಂದೇ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಓದಿದ್ದರು ವಾಜಪೇಯಿ.
1950ರ ಆದಿಭಾಗದಲ್ಲಿ ಆರ್ ಎಸ್ಎಸ್ ಮ್ಯಾಗಜೀನ್ ನಡೆಸಲು ಕಾನೂನು ಕಾಲೇಜಿನಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ವಾಜಪೇಯಿಯವರ ತಂದೆ ಸರ್ಕಾರಿ ನೌಕರ, ಮಗ ಆರ್ ಎಸ್ಎಸ್ ಖಾಕಿ ಯೂನಿಫಾರ್ಮ್ ಧರಿಸುವುದು ಇಷ್ಟವಿರಲಿಲ್ಲ, ಹೀಗಾಗಿ ವಾಜಪೇಯಿ ಸಹೋದರಿ ಅವರ ಆರ್ ಎಸ್ ಎಸ್ ಪ್ಯಾಂಟ್ ಗಳನ್ನು ಎಸೆಯುತ್ತಿದ್ದರಂತೆ.
ಅಟಲ್ ಬಿಹಾರಿ ವಾಜಪೇಯಿಗೆ ಪತ್ರಕರ್ತನಾಗಬೇಕೆಂಬ ಆಸೆಯಿತ್ತು. ಅದನ್ನು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ ಆಗಿದ್ದು ಮಾತ್ರ ರಾಜಕಾರಣಿ.
1957ರಲ್ಲಿ ಮೊದಲ ಚುನಾವಣೆ ಗೆದ್ದಿದ್ದು. ಚುನಾವಣೆಗೆ ಮುನ್ನ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಹಠಾತ್ ನಿಧನವಾಗಿತ್ತು. ಆಗ ವಾಜಪೇಯಿಯವರೇ ಮುನ್ನಲೆಗೆ ಬಂದು 1957ರಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದರು.
10 ಬಾರಿ ಸಂಸದ: ರಾಜಕೀಯದಲ್ಲಿ ಅಪಾರ ಅನುಭವ ಮತ್ತು ಜ್ಞಾನದಿಂದ ವಾಜಪೇಯಿಯವರು 10 ಬಾರಿ ಲೋಕಸಭೆಗೆ ಮತ್ತು ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಬಂದಿದ್ದರು. ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಸಂಪೂರ್ಣ ಅವಧಿ ಪೂರ್ಣಗೊಳಿಸಿದ ಮೊದಲಿಗರು.
1998ರಲ್ಲಿ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗೆ ಅನುಮತಿ ನೀಡಿದ್ದು ಅವರ ಆಡಳಿತದ ಪ್ರಮುಖ ನಿರ್ಧಾರ. ಅವರು ಪ್ರಧಾನಿಯಾಗಿದ್ದಾಗ ಹಲವು ಬಾರಿ ಪರಮಾಣು ಪರೀಕ್ಷೆಯಾಗಿತ್ತು.
ದೆಹಲಿ-ಲಾಹೋರ್ ನಡುವೆ ಬಸ್ ಸೇವೆಯನ್ನು ಫೆಬ್ರವರಿ 1999ರಲ್ಲಿ ಆರಂಭಿಸಿದರು.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಮಾತನಾಡಿದ್ದರು. 1977ರಲ್ಲಿ ವಾಜಪೇಯಿಯವರು ಮೊದಲ ಬಾರಿಗೆ ವಿದೇಶಾಂಗ ಸಚಿವರಾಗಿ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದರು.
ಡಿಸೆಂಬರ್ 25ರಂದು ವಾಜಪೇಯಿಯವರ ಜನ್ಮದಿನವನ್ನು ಉತ್ತಮ ಆಡಳಿತ ದಿನ ಎಂದು ಎನ್ ಡಿಎ ಸರ್ಕಾರ ಆಚರಿಸುತ್ತದೆ.
ಮೂಲತಃ ಕವಿಯಾಗಿದ್ದ ವಾಜಪೇಯಿಯವರು ಹಲವು ಕವಿತೆಗಳನ್ನು ಬರೆದಿದ್ದಾರೆ. ನಯಿ ದಿಶಾ(1999) ಮತ್ತು ಸಂವೇದನಾ(2002)ರಲ್ಲಿ ಅವರ ಕವಿತೆ ಆಲ್ಬಂಗಳು ಬಿಡುಗಡೆಯಾಗಿದ್ದವು.
ಅಜನ್ಮ ಬ್ರಹ್ಮಚಾರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ನಮಿತಾ ಎಂಬ ಹೆಣ್ಣುಮಗಳನ್ನು ದತ್ತು ಪಡೆದಿದ್ದರು.