ಪ್ರತ್ಯೇಕ ಲಿಂಗಾಯತ ಧರ್ಮ: ಡಿಕೆಶಿ - ಎಂಬಿ ಪಾಟೀಲ್ ನಡುವೆ ತಿಕ್ಕಾಟ; ಪಕ್ಷದ ವರಿಷ್ಠರಿಗೆ ಪಿಕಲಾಟ!

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಕಾಂಗ್ರೆಸ್ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿತು ಎಂಬ ಸಚಿವ ಡಿ ಕೆ ಶಿವಕುಮಾರ್ ಹೇಳಿಕೆಗೆ ಗೃಹ ಸಚಿವ ಎಂ ಬಿ ...
ಶಿವಕುಮಾರ್ ಮತ್ತು ಎಂ.ಬಿ ಪಾಟೀಲ್
ಶಿವಕುಮಾರ್ ಮತ್ತು ಎಂ.ಬಿ ಪಾಟೀಲ್
ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಕಾಂಗ್ರೆಸ್ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿತು ಎಂಬ ಸಚಿವ ಡಿ ಕೆ ಶಿವಕುಮಾರ್ ಹೇಳಿಕೆಗೆ ಗೃಹ ಸಚಿವ ಎಂ ಬಿ ಪಾಟೀಲ್ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ ಇಬ್ಬರ ತಿಕ್ಕಾಟ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಪಕ್ಷದ ವರಿಷ್ಠರಿಗೆ ಪೀಕಲಾಟ ತಂದಿಟ್ಟಿದೆ. 
ಶುಕ್ರವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಸಚಿವ ಎಂ.ಬಿ ಪಾಟೀಲ್​ಅವರು ಸಚಿವ ಡಿ.ಕೆ  ಶಿವಕುಮಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
'ನೀವು ಅಧ್ಯಕ್ಷರಿದ್ದೀರಿ. ನೀವು ಮೊದಲು ಅತನಿಗೆ ಹೇಳಬೇಕು. ಅವನೇನು ಮೇಲಿಂದ ಬಂದಿದ್ದನಾ ? ಅವನು ಮಾತನಾಡಿದ ಬಳಿಕ ತಾವೂ ಪ್ರತಿಕ್ರಿಯೆ ನೀಡಲೇಬೇಕು. ಇದೇ ಮೊದಲಲ್ಲ ಹಲವಾರು ಬಾರಿ ವೇದಿಕೆಗಳಲ್ಲಿ ಈ ವಿಷಯವನ್ನು ಆತ ಪ್ರಸ್ತಾಪಿಸಿದ್ದಾನೆ. ನೀವು ಆತನ ಬಗ್ಗೆ ಮೃದು ಧೋರಣೆ ತಾಳಬೇಡಿ. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ  ಕ್ಷಮೆ ಕೇಳಲು  ಆತ ಯಾರು? ಆತನೇನು ಕೆಪಿಸಿಸಿ ಅಧ್ಯಕ್ಷನಾ?  ಮೂರನೇ ಸಲ ಈತ ಕ್ಷಮೆ ಕೇಳಿದ್ದಾನೆ. ಆತ ಎಷ್ಟು ಸಲ ಈ  ವಿಷಯ ಪ್ರಸ್ತಾಪಿಸುತ್ತಾನೆ ಅಷ್ಟು ಸಲ ನಾನು ಪ್ರತಿಕ್ರಿಯೆ ನೀಡುತ್ತೇನೆ. ನಮ್ಮ ಧರ್ಮದಲ್ಲಿ ಅವನದೇನು ಕೆಲಸ? ಆತ ಮಾತನಾಡಿದರೆ ನಾನು ಪ್ರತಿಕ್ರಿಯೆ ನೀಡಿಯೇ  ತೀರುತ್ತೇನೆ. ಅವನಿಗೆ ಎಚ್ಚರಿಕೆ ಕೊಡಿ. ನನಗೆ ಹೇಳಲು ಬರಬೇಡಿ. ಆತ ಸುಧಾರಣೆಯಾದರೆ ನಾವೂ ಸುಧಾರಿಸಿಕೊಳ್ಳುತ್ತೇವೆ' ಎಂದು ಸಚಿವ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ಸಚಿವ ಎಂ.ಬಿ. ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷರಿಗೆ ದೂರವಾಣಿಯಲ್ಲೇ ತರಾಟೆ ತೆಗೆದುಕೊಂಡಿದ್ದಾರೆ.
ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.ಶಿವಕುಮಾರ್ ,ತಾವು ಸ್ಪಷ್ಟವಾಗಿ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಇದು ತಮ್ಮ ನಿರ್ಧಾರ. 
ನಾನು ರಾಜ್ಯದ ಒಬ್ಬ ಪ್ರಜೆ. ತಮಗೆ ನನ್ನದೆ ಆದ ಸ್ವಾತಂತ್ರ್ಯ ಇದೆ. ತಾವು ಯಾವುದಕ್ಕೂ ಮೂಗು ತೂರಿಸುವುದಿಲ್ಲ. ಸಚಿವ ಎಂ.ಬಿ.ಪಾಟೀಲ್ ಏನಾದ್ರು ಮಾತಾಡಲಿ, ಅವರೆಲ್ಲ ನನ್ನ ಸಹೋದರರು,  ತಮ್ಮ ಗುರುಗಳು,ತಾವು ಅವರ ಶಿಷ್ಯ. ನನ್ನ ವೈಯಕ್ತಿಕ ಅಭಿಪ್ರಾಯ, ಟೀಕೆ ಟಿಪ್ಪಣಿ ಮಾಡಲಿ.
ಪಕ್ಷಕ್ಕೆ ಹಾನಿಯನ್ನುಂಟು ಮಾಡುವ ಬಗ್ಗೆ ಯಾರೂ ಮಾತನಾಡಿನಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ತಮ್ಮ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದರೆ ಶಿಕ್ಷೆಯನ್ನ ತಾವು ಪ್ರಸಾದ ಎಂದು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಹೇಳಿಕೆಯನ್ನು ಸಚಿವ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com