ಬೆಂಗಳೂರು: ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದಾಯ ತೆರಿಗೆ ಇಲಾಖೆಗೆ ನೀಡಿದ್ದ ದೂರಿನ ತನಿಖೆಯನ್ನು ಇಲಾಖೆ ಕೈಬಿಟ್ಟಿದೆ.
ಕಾಂಗ್ರೆಸ್ ಶಾಸಕರಾದ ಬಿ.ಸಿ.ಪಾಟೀಲ್, ನಾಗೇಂದ್ರ ಮತ್ತು ದಿವಂತಗ ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರಿಗೆ ಬಿಜೆಪಿ ತಲಾ 30 ಕೋಟಿ ಹಣ ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡಿತ್ತು ಎಂದು ದಿನೇಶ್ ಗುಂಡೂರಾವ್ ಅವರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು.
ದೂರನ್ನು ಆಧರಿಸಿ ಐಟಿ ಇಲಾಖೆ ಶಾಸಕರಾದ ಬಿ.ಸಿ.ಪಾಟೀಲ್ ಮತ್ತು ನಾಗೇಂದ್ರ ಅವರ ವಿಚಾರಣೆ ನಡೆಸಿದ್ದು, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹಣಕಾಸಿನ ವಹಿವಾಟು ನಡೆಸಿಲ್ಲ. ಮೂರನೇ ವ್ಯಕ್ತಿಯಿಂದ ನಡೆದಿರುವ ಮಾತುಕತೆ ಇದಾಗಿದೆ. ಹೀಗಾಗಿ ಪ್ರಕರಣದಲ್ಲಿ ಸತ್ಯಾಂಶವಿಲ್ಲದಿರುವುದು ಕಂಡುಬಂದಿದ್ದು, ಪ್ರಕರಣದ ಕುರಿತು ಬೇರೆ ಯಾವುದಾದರೂ ಪೂರಕ ದಾಖಲೆಗಳಿದ್ದರೆ ನಮಗೆ ತಲುಪಿಸಿದ್ದರೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕರ್ನಾಟಕ ಮತ್ತು ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ ಆಯುಕ್ತ ಬಿ.ಆರ್. ಬಾಲಕೃಷ್ಣನ್ ದಿನೇಶ್ ಗುಂಡೂರಾವ್ಗೆ ಪತ್ರ ಬರೆದಿದ್ದಾರೆ.
ಐಟಿ ಇಲಾಖೆಗೆ ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ದೂರು ನೀಡಿದರೂ ಇದುವರಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಪರಮೇಶ್ವರ್ ಪದೇ ಪದೇ ಐಟಿ ಇಲಾಖೆ ವಿರುದ್ದ ಆರೋಪಿಸಿದ್ದರು. ಈಗ ಬಾಲಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಬರೆದಿರುವ ಪತ್ರದಿಂದಾಗಿ ಆಪರೇಷನ್ ಕಮಲದ ಆರೋಪದಿಂದ ಸದ್ಯಕ್ಕೆ ಬಿಜೆಪಿ ಪಾರಾದಂತಾಗಿದೆ.
Advertisement