ಉಪ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: ಹಿರಿಯ ಮುಖಂಡರ ನೇತೃತ್ವದಲ್ಲಿ ತಂಡ ರಚನೆ

ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಲಿದ್ದು,...
ಕಾಂಗ್ರೆಸ್ ನಾಯಕರ ಸಭೆ
ಕಾಂಗ್ರೆಸ್ ನಾಯಕರ ಸಭೆ
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಲಿದ್ದು, ಚುನಾವಣೆಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದೆ.
ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಕ್ಷೇತ್ರದಲ್ಲಿ ಮತ್ತೆ ಪಕ್ಷ ಅರಳುವಂತೆ ಮಾಡಲು ಈಗಿನಿಂದಲೇ ಭರ್ಜರಿ ತಾಲೀಮು ನಡೆಸಿದೆ. ಜೆಡಿಎಸ್‍ ಜೊತೆ ಮೈತ್ರಿ ಕಡಿದುಕೊಂಡು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಕಾಂಗ್ರೆಸ್, ಚುನಾವಣೆಯಲ್ಲಿ ಗೆಲುವ ಸಾಧಿಸಲು ಕಾರ್ಯತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ಹಿರಿಯ ಮುಖಂಡರ ನೇತೃತ್ವದಲ್ಲಿ ವೀಕ್ಷಕರ ತಂಡ ರಚನೆಯಾಗಲಿದೆ.
ಈ ನಿಟ್ಟಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮುಖಂಡರ ಸಭೆ ನಡೆಯಿತು. 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸೂಕ್ತ ಅಭ್ಯರ್ಥಿಯ ಹುಡುಕಾಟ,  ಪಕ್ಷ ಸಂಘಟನೆ ಹಾಗೂ  ಉಸ್ತುವಾರಿ  ನೇಮಕ ಮಾಡಲು ಸಭೆ ತೀರ್ಮಾನಿಸಿದೆ. 
ಸಭೆಯಲ್ಲಿ ಪಕ್ಷ ಸಂಘಟನೆ, ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಪ್ರಬಲರು ಯಾರು? ಅನರ್ಹ ಶಾಸಕರ ಮುಂದಿನ ನಡೆಯೇನು? ಸುಪ್ರಿಂಕೋರ್ಟ್ ನಲ್ಲಿ ಸ್ಪೀಕರ್ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರ, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ಮಹತ್ತರ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ಕೆಪಿಸಿಸಿ ಹಿರಿಯ ಮುಖಂಡರು,  ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷದ ಮುಂದಿನ ಹಾದಿಯ ಬಗ್ಗೆ, ಅನರ್ಹರ ಬಗ್ಗೆ ಕಾನೂನಿನ ಹೋರಾಟದ ಬಗ್ಗೆ ಪಕ್ಷದ ನಿಲುವು ಕುರಿತು ದೀರ್ಘ ಸಮಾಲೋಚನೆ  ನಡೆಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದಿರುವವರಿಗೆ ತಕ್ಕಪಾಠ ಕಲಿಸಬೇಕು. ರಮೇಶ್ ಕುಮಾರ್ ಸಭಾಧ್ಯಕ್ಷರಾಗಿ ಕಾನೂನಿನ ಪ್ರಕಾರ ಉತ್ತಮ ತೀರ್ಪು ಪ್ರಕಟಿಸಿದ್ದಾರೆ. ಆದರೆ ನಂಬಿಕೆದ್ರೋಹಿಗಳು ಸುಪ್ರಿಂಕೋರ್ಟ್ ಮೂಲಕ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಬೆನ್ನಿಗೆ ಚೂರಿ ಹಾಕಿರುವ 17 ಅನರ್ಹರಿಗೆ ತಕ್ಕಪಾಠ ಕಲಿಸಲು ಸರಿಯಾದ ನಿರ್ಣಯ ಯಾವುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಅನರ್ಹನ್ನು ಪಕ್ಷದಿಂದ ಉಚ್ಛಾಟಿಸಲಾಗಿದ್ದು, ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಬಗ್ಗೆಯಾಗಲೀ, ಅವರೊಂದಿಗೆ ರಾಜೀ ಮಾಡಿಕೊಳ್ಳುವುದಾಗಲೀ ಮಾಡುವುದಿಲ್ಲ. ಕ್ಷೇತ್ರದ ಕಾರ್ಯಕರ್ತರು ಅನರ್ಹರ ಬೆಂಬಲಕ್ಕೆ ನಿಲ್ಲದಂತೆ ಸೂಚನೆ ನೀಡಲಾಗಿದೆ ಎಂದರು.
ಆಪರೇಷನ್ ಕಮಲ ಇನ್ನೂ ನಿಂತಿಲ್ಲ. ಬಿಜೆಪಿ ನಾಯಕರು ಕಾಂಗ್ರೆಸ್‍ನ ಶಾಸಕರಿಗೆ ಆಮಿಷ ಒಡ್ಡುವುದನ್ನು ಮುಂದುವರೆಸಿದ್ದಾರೆ. ಆದರೆ ಬಿಜೆಪಿಯಂತೆ ಕಾಂಗ್ರೆಸ್ ಮಾಡುವುದಿಲ್ಲ. ಶುಕ್ರವಾರ ಉಪ ಚುನಾವಣೆಯ ವೀಕ್ಷಕರ ತಂಡದ ಪಟ್ಟಿ ಪ್ರಕಟ ಮಾಡಲಾಗುತ್ತಿದೆ ಎಂದರು.
ಲಿಂಗಾಯತ ಸಮುದಾಯದ ಮುಖಂಡರು ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಅವರು 15 ಶಾಸಕರಿಗೆ ವಿಷ ಕೊಡಬೇಕೇ ಎಂದು ಪ್ರಶ್ನಿಸಿರುವುದು ಅವರ ಮಾತುಗಳಲ್ಲೇ ಸ್ಪಷ್ಟವಾಗಿದೆ. ಶಾಸಕರ ಕುದುರೆ ವ್ಯಾಪಾರ ಬಗ್ಗೆ ಅವರ ಬಾಯಿಂದಲೇ ಮಾತುಗಳು ಹೊರಬರುತ್ತಿವೆ ಎಂದರು. 
ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ  ಡಿ.ಕೆ ಶಿವಕುಮಾರ್,   ಹೆಚ್.ಕೆ.ಪಾಟೀಲ್, ಖಾದರ್,  ಶಿವಾನಂದ ಪಾಟೀಲ್, ಹೆಚ್.ಸಿ.ಮಹದೇವಪ್ಪ,  ಆರ್.ವಿ.ದೇಶಪಾಂಡೆ,  ಕೃಷ್ಣ ಭೈರೇಗೌಡ, ತುಕರಾಂ,  ಚಲುವರಾಯಸ್ವಾಮಿ,  ರಾಮಲಿಂಗರೆಡ್ಡಿ, ಮಾಜಿ ಸಂಸದರಾದ ಕೆ.ಹೆಚ್.ಮುನಿಯಪ್ಪ,  ವೀರಪ್ಪ ಮೊಯ್ಲಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com