ಶಾಸಕರ ಕುದುರೆ ವ್ಯಾಪಾರದ ಕುರಿತು ಯಡಿಯೂರಪ್ಪ ಅವರೇ ಬಾಯಿ ಬಿಟ್ಟಿದ್ದಾರೆ: ದಿನೇಶ್ ಗುಂಡೂರಾವ್

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕುದುರೆ ವ್ಯಾಪಾರದ ಕುರಿತು ಸ್ವತಃ ಬಿಎಸ್ ಯಡಿಯೂರಪ್ಪ ಅವರೇ ಬಾಯಿ ಬಿಟ್ಟಿದ್ದು, ಈಗಲೂ ಸಹ ಕಾಂಗ್ರೆಸ್-ಜೆಡಿಎಸ್ ಶಾಸಕರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರ್ ಅವರು ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕುದುರೆ ವ್ಯಾಪಾರದ ಕುರಿತು ಸ್ವತಃ ಬಿಎಸ್ ಯಡಿಯೂರಪ್ಪ ಅವರೇ ಬಾಯಿ ಬಿಟ್ಟಿದ್ದು, ಈಗಲೂ ಸಹ ಕಾಂಗ್ರೆಸ್-ಜೆಡಿಎಸ್ ಶಾಸಕರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರ್ ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಲಿಂಗಾಯತ ಸಮುದಾಯದ ಮುಖಂಡರು ಸಿಎಂ ಬಿಎಸ್ ವೈರನ್ನು ಭೇಟಿ ಮಾಡಿದಾಗ ಅವರ ಸಮುದಾಯದ ಶಾಸಕರಿಗೆ ಸಚಿವ ಸ್ಥಾನಕ್ಕೆ ಅಗ್ರಹಿಸಿದರು. ಈ ವೇಳೆ ಯಡಿಯೂರಪ್ಪ ರಾಜಿನಾಮೆ ನೀಡಿದ 15 ಶಾಸಕರಿಗೆ ವಿಷ ಕೊಡಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ. ಅವರ ಈ ಮಾತಿನಲ್ಲೇ ಎಲ್ಲವೂ ಸ್ಪಷ್ಟವಾಗಿದೆ. ಕುದುರೆ ವ್ಯಾಪಾರ ಮಾಡಿರುವುದು ಅವರ ಬಾಯಿಂದ ಬಂದಿದೆ. ಇಂದು ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಇಂದು ನಡೆದ ಕೆಪಿಸಿಸಿ ಸಭೆಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಅತೃಪ್ತರ ವಿರುದ್ಧ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಾಗಿದೆ. ನಮ್ಮ ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾದ ಕ್ರಮ ಆಗಬೇಕು. ಹೀಗಾಗಿ ಅತೃಪ್ತ ಅನರ್ಹ ಶಾಸಕರನ್ನ ಪಕ್ಷದಿಂದ ಉಚ್ಚಾಟನೆ ಮಾಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಅವರ ಜತೆ ಹೋಗಬಾರದು. ಆ ಕ್ಷೇತ್ರದ ಬ್ಲಾಕ್ ಸಮಿತಿ ಅಧ್ಯಕ್ಷರನ್ನೂ ವಿಸರ್ಜನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಉಪ ಚುನಾವಣೆ ನಿಶ್ಚಿತ
ಉಪ ಚುನಾವಣೆ 17 ಕ್ಷೇತ್ರಗಳಲ್ಲಿ ನಿಶ್ಚಿತ. ಹೀಗಾಗಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ. ಉಪಚುನಾವಣೆ ಸಂಬಂಧ ಹಿರಿಯ ನಾಯಕರಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಪಕ್ಷಕ್ಕೆ ಬದ್ಧರಾಗಿರುವವರಿಗೆ ಟಿಕೆಟ್ ಕೊಡಿ ಅಂತ ಹೇಳಿದ್ದಾರೆ. ಅದಕ್ಕೆ ನಾವು ಬದ್ಧರಾಗಿ ಟಿಕೆಟ್ ಕೊಡಲು ನಿರ್ಧಾರ ಮಾಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಪ್ರತಿ ಕ್ಷೇತ್ರಕ್ಕೂ ಒಂದೊಂದು ತಂಡ ರಚನೆ
ಇದೇ ವೇಳೆ ಪ್ರತಿ ಕ್ಷೇತ್ರಕ್ಕೂ ಒಂದೊಂದು ತಂಡ ರಚನೆ ಮಾಡಲಿದ್ದೇವೆ ಎಂದು ಹೇಳಿದ ದಿನೇಶ್ ಗುಂಡೂರಾವ್ ಅವರು, ಪಕ್ಷದ ಹಿರಿಯ ಮುಖಂಡರೊಬ್ಬರನ್ನು ಆ ಕ್ಷೇತ್ರದ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗುತ್ತದೆ. ಉಸ್ತುವಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿ, ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ. ಉಪಚುನಾವಣೆಗೆ ಕ್ಷೇತ್ರದಲ್ಲಿ ಅಗತ್ಯ ತಯಾರಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕರ್ತರಿಗೂ ಎಚ್ಚರಿಕೆ
ಇದೇ ವೇಳೆ ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳಿದ ದಿನೇಶ್ ಗುಂಡೂರಾವ್ ಅವರು, ಆ ಕ್ಷೇತ್ರಗಳ ಬ್ಲಾಕ್ ಸಮಿತಿಗಳನ್ನು ವಿಸರ್ಜಿಸಿ, ಅಧ್ಯಕ್ಷರನ್ನು ವಜಾಗೊಳಿಸಲಾಗಿದೆ. ಹಾಗಾಗಿ ಕಾಂಗ್ರೆಸ್ ಸದಸ್ಯರು, ಕಾರ್ಯಕರ್ತರು ಅನರ್ಹರ ಜೊತೆ ಹೋಗಬಾರದು. ಪಕ್ಷದ ವಿಶ್ವಾಸಕ್ಕೆ ದ್ರೋಹ ಬಗೆದವರೊಂದಿಗೆ ಗುರುತಿಸಿಕೊಳ್ಳಬಾರದು. ಒಂದು ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅನರ್ಹರೊಂದಿಗೆ ಗುರುತಿಸಿಕೊಂಡರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com