ಬೆಂಗಳೂರು: ನಾನು ಗೃಹ ಸಚಿವನಾಗಿದ್ದ ಅವಧಿಯಲ್ಲಿ ದೂರವಾಣಿ ಕದ್ದಾಲಿಕೆ ನಡೆದಿಲ್ಲ.ಒಂದು ವೇಳೆ ನಡೆದಿದ್ದರೂ ಅದು ತಮ್ಮ ಗಮನಕ್ಕೆ ಬಂದಿಲ್ಲ, ಇದು ಗೃಹ ಸಚಿವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಜಾಣ್ಮೆಯ ಹೇಳಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಗೃಹ ಸಚಿವರಾಗಿದ್ದ ವೇಳೆ ಅಂತಹ ಯಾವುದೆ ಪ್ರಕರಣ ನಡೆದಿಲ್ಲ.ಒಂದು ವೇಳೆ ನಡೆದಿದ್ದರೂ ಅದು ತಮ್ಮ ವ್ಯಾಪ್ತಗೆ ಬರುತ್ತಿರಲಿಲ್ಲ.ಒಂದು ವೇಳೆ ದೂರವಾಣಿ ಕದ್ದಾಲಿಕೆ ನಡೆದಿದ್ದರೆ ತನಿಖೆ ನಡೆಸಬಹುದು. ಭಯೋತ್ಪಾದಕರು ಮತ್ತು ಅಪರಾಧಿಗಳ ಚಲನವಲನ,ಕೃತ್ಯಗಳ ಮೇಲೆ ಕಣ್ಣಿಡಲು ಗೃಹ ಇಲಾಖೆ ಅನುಮತಿ ಪಡೆದು ಕದ್ದಾಲಿಕೆ ಮಾಡುತ್ತಾರೆ.
ಅದನ್ನು ಹೊರತುಪಡಿಸಿದರೆ ಉಳಿದ ಸಂದರ್ಭಗಳಲ್ಲಿ ನಡೆದಿರಲಿಕ್ಕೆ ಸಾಧ್ಯವಿಲ್ಲ.ಒಂದು ವೇಳೆ ಸಂಶಯವಿದ್ದರೆ ತನಿಖೆ ನಡೆಸಲಿ ಪರಮೇಶ್ವರ್ ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೂರೂ ಪಕ್ಷದ ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ನಡೆದಿತ್ತೆನ್ನುವ ವಿಚಾರ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.ಈ ಬಗೆಗೆ ಪ್ರತಿಕ್ರಯಿಸಿರುವ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ "ಗೃಹ ಇಲಾಖೆ, ಇಂಟೆಲಿಜನ್ಸ್ ಗಳು ಬೇರೆ ಬೇರೆಯಾಗಿದೆ.ಹಾಗಾಗಿ ಫೋನ್ ಟ್ಯಾಪಿಂಗ್ ಬಗೆಗೆ ನನ್ನ ಗಮನಕ್ಕೆ ಏನೂ ಬಂದಿಲ್ಲ" ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಅಲ್ಲದೆ ಹಾಗೊಂದುವೇಳೆ ಕದ್ದಾಲಿಕೆ ಕುರಿತಂತೆ ಅನುಮಾನಗಳಿದ್ದರೆ ಯಡಿಯೂರಪ್ಪ ತನಿಖೆಗೆ ಆದೇಶಿಸಲಿ. ತನಿಖೆ ನಡೆಸಿದರೆ ಯಾರು? ಯಾವ ಕಾರಣಕ್ಕೆ ಫೋನ್ ಟ್ಯಾಪ್ ಮಾಡಿಸಿದ್ದರು ಎಂಬುದು ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.
Advertisement