ಹರಪನಹಳ್ಳಿ: ಬಿಜೆಪಿಯವರು ಉಪ ಚುನಾವಣೆಯ ಸೋಲಿನ ಭೀತಿಯಿಂದ ಆಪರೇಷನ್ ಕಮಲ-2 ನಡೆಸಲು ಕೈ ಹಾಕಿದ್ದಾರೆ. ಅಂತಹ ಕೆಲಸಕ್ಕೆ ಮತ್ತೊಮ್ಮೆ ಕೈ ಹಾಕಿದರೆ ರಾಜ್ಯದ ಜನತೆ ಸುಮ್ಮನೆ ಕೂರುವುದಿಲ್ಲ. ಈಗಾಗಲೇ ಜನ ಬೇಸತ್ತು ಹೋಗಿದ್ದಾರೆ. ಮತ್ತೊಮ್ಮೆ ನಡೆದರೆ ರೊಚ್ಚಿಗೆದ್ದು ಅವರನ್ನು ಹರಾಜು ಹಾಕುತ್ತಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಡು ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ 11-12ರಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮತ ಯಂತ್ರದ ಬಗ್ಗೆ ಈಗಲೇ ಅನುಮಾನವಿದೆ. ಬೇರೆ ಬೇರೆ ದೇಶದಲ್ಲಿ ಇವಿಎಂ ಬಳಕೆ ಕೈ ಬಿಡಲು ಚುನಾವಣೆ ಆಯೋಗ ಗಂಭೀರವಾಗಿ ಚಿಂತಿಸಬೇಕು ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ನಲ್ಲಿ ಒಡಕಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ಅನೈತಿಕವಾಗಿ, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಇಂದೂ ಯಡಿಯೂರಪ್ಪನವರ ಸರ್ಕಾರಕ್ಕೆ ಬಹುಮತವಿಲ್ಲ. ಕೃತಕ ಬಹುಮತ ಸೃಷ್ಟಿಸಲಾಗಿದೆ. ಈ ಉಪ ಚುನಾವಣೆ ನಂತರ ಬಹುಮತ ಕಳೆದುಕೊಳ್ಳಲಿದೆ. ಮೈನಾರಿಟಿ ಸರ್ಕಾರದ ಪತನ ಗ್ಯಾರಂಟಿ. ಈ ಸರ್ಕಾರ ಬಿದ್ದ ನಂತರ ಮುಂದೇನಾಗುತ್ತದೆ ಎಂಬುದನ್ನು ನೋಡೋಣ ಎಂದಿದ್ದಾರೆ.
Advertisement