ಸೂಲಿಬೆಲೆ: ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಹೊಸಕೋಟೆ ಕ್ಷೇತ್ರದ ಉಪಚುನಾವಣೆ ಗುರುವಾರ ಶಾಂತಿಯುತವಾಗಿ ನಡೆದಿದೆ. ಕೆಲವೆಡೆ ಇವಿಎಂ, ವಿವಿಪ್ಯಾಂಟ್ ಕೈಕೊಟ್ಟಿರುವುದರಿಂದ ಮತದಾನ ಆರಂಭವಾಗುವುದು ವಿಳಂಬವಾಗಿತ್ತು.
ಒಟ್ಟು 286 ಮತಗಟ್ಟೆಯಲ್ಲಿ 1,96,012 ಮಂದಿ ಮತಚಲಾಯಿಸಿದ್ದು, ಶೇ.90.44 ರಷ್ಟು ಮತದನಾ ನಡೆದಿದೆ. ಈ ಪ್ರಮಾಣದ ಮತದಾನ ರಾಜ್ಯದಲ್ಲಿಯೇ ಅತೀ ಹೆಚ್ಚು. ಇಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆಯಿದ್ದು, ಯಾರು ಗೆಲ್ಲುತ್ತಾರೆಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ಶುರುವಾಗಿದೆ.
ಹೊಸಕೋಟೆ ಸರ್ಕಾರಿ ಪ್ರೌಢಸಾಲೆ ಮಧ್ಯಾಹ್ನದ ಹೊತ್ತಿಗೆ ಸಂಸದ ಬಚ್ಚೇಗೌಡ ಮತದಾನ ಮಾಡಿದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ, ತಾಯಿ ಉಮಾ ಹಾಗೂ ಪತ್ನಿ ಪ್ರತಿಭಾ ಜೊತೆ ಬಂದು ಬೆಳಿಗ್ಗೆಯೇ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಮತ್ತು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರ ಮತ ಈ ಕ್ಷೇತ್ರದಲ್ಲಿ ಇಲ್ಲ.
ಹೊಸಕೋಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬೆಂಬಲಿಕಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಏರ್ಪಟ್ಟಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
Advertisement