ಮೈಸೂರು: ಕ್ಷೇತ್ರಕ್ಕೆ ಅಪಾರ ಪ್ರಮಾಣದ ಅನುದಾನ, ಹುಣಸೂರನ್ನು ಹೊಸ ಜಿಲ್ಲೆಯಾಗಿ ರಚನೆ ಹಾಗೂ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುವುದಾಗಿ ಯಡಿಯೂರಪ್ಪ ಸರ್ಕಾರ ಘೋಷಿಸಿದರೂ ಹುಣಸೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಎ.ಎಚ್ ವಿಶ್ವನಾಥ್ ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 39,727 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಹಳ್ಳಿ ಹಕ್ಕಿ ಎಂದೇ ಖ್ಯಾತಿಯಾಗಿದ್ದ ಬಿಜೆಪಿ ಅಭ್ಯರ್ಥಿ ಎ.ಎಚ್ ವಿಶ್ವನಾಥ್ ಅವರ ಕನಸುು ಭಗ್ನವಾಗಿದೆ,
ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ, ಎಚ್. ಡಿ ಕುಮಾರಸ್ವಾಮಿನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ್ದು ವಿಶ್ವನಾಥ್ ಎಂದು ಬಿಂಬಿತವಾಗಿದ್ದರು.
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಒಕ್ಕಲಿಗರನ್ನು ಹಾಗೂ ಶ್ರೀರಾಮುಲು ನಾಯಕ ಸಮುದಾಯವನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ, ಮಾಜಿ ಸಚಿವ ಜಿ.ಟಿ ದೇವೇಗೌಡ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಕೈ ಕೊಟ್ಟಿದ್ದರು, ಇದು ಬಿಜೆಪಿಗೆ ಹಿನ್ನಡೆಯಾಗಿದೆ, ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತ ಪಡೆದಿದ್ದಾರೆ.
ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು, ನಾಯಕ ಸಮುದಾಯದ ಮತದಾರರನ್ನು ಶ್ರೀರಾಮುಲು ಪ್ರಭಾವಕ್ಕೆ ಒಳಗಾಗುವುದನ್ನು ನಿಯಂತ್ರಿಸಿದ್ದಾರೆ, ಮಾಜಿ ಸಚಿವ ಎಚ್,ಸಿ ಮಹಾದೇವಪ್ಪ, ಮಾಜಿ ಸಂಸದ ಧ್ರುವನಾರಾಯಣ್, ಮತ್ತಿತರ ದಲಿತ ಮುಖಂಡರು ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ, ಆದರೆ ಶ್ರೀನಿವಾಸ್ ಪ್ರಸಾದ್ ತಂತ್ರಗಾರಿಕೆ ಯಾವುದೇ ಕೆಲಸ ಮಾಡಿಲ್ಲ.
ಅನೇಕ ಸಾಂಪ್ರದಾಯಿಕ ಜೆಡಿ (ಎಸ್) ಮತದಾರರು ಹಳೆಯ ಪಕ್ಷಕ್ಕೆ ಮೊರೆ ಹೋಗಿದ್ದಾರೆ. ಮೂರು ಪಕ್ಷಗಳ ನೇರ ಹೋರಾಟ ಕಾಂಗ್ರೆಸ್ ಗೆ ಲಾಭವಾಗಿದೆ, ಬಿಜೆಪಿಯ ಸಂಘಟನಾತ್ಮಕ ಹೋರಾಟ ಇಲ್ಲಿ ಫಲ ನೀಡಲಿಲ್ಲ, ಹುಣಸೂರು ಕ್ಷೇತ್ರದ ಚುನಾವಣೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು, ದಲಿತ, ಕುರುಬ ಹಾಗೂ ಹಿಂದುಳಿದ ವರ್ಗಗಳ ಮತದಾರರೇ ಅಧಿಕ ಸಂಖ್ಯೆಯಲ್ಲಿರುವ ಮತದಾರರು ಬಿಜಪಿಯನ್ನು ತಿರಸ್ಕರಿಸಿದ್ದಾರೆ,
ಹುಣಸೂರಿನಲ್ಲಿ ಬಿಜೆಪಿಗೆ ಬೆಂಬಲ ನೀಡಬಾರದು ಎಂದು ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಲ್ಲಿನ ಅಲ್ಪ ಸಂಖ್ಯಾತರಿಗೆ ಮನವಿ ಮಾಡಿದ್ದರು. ಒಟ್ಟಿನಲ್ಲಿ ಕಾಂಗ್ರೆಸ್ ಜೆಡಿಎಸ್ ಸೇರಿ ಹಳ್ಳಿ ಹಕ್ಕಿಯ ರೆಕ್ಕೆ ಕತ್ತರಿಸಿ ಮೇಲಕ್ಕೆ ಹಾರದಂತೆ ಬಿಸಾಡಿದ್ದಾರೆ
Advertisement