ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮನವೊಲಿಸಲು ತೀವ್ರ ಕಸರತ್ತು

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರನ್ನು ಅವರ ಆಪ್ತರು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರನ್ನು ಅವರ ಆಪ್ತರು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸದಸ್ಯರಾದ ಜಯಮಾಲಾ, ಐವನ್ ಡಿಸೋಜಾ, ಶಾಸಕ ಜಮೀರ್ ಅಹ್ಮದ್, ನಾಯಕರಾದ ಬಾಲಕೃಷ್ಣ, ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಕೆ.ಎನ್.ರಾಜಣ್ಣ‌ ಸೇರಿದಂತೆ ಹಲವರು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಭೇಟಿ ಬಳಿಕ ಜಯಮಾಲಾ ಮಾತನಾಡಿ, ಸಿದ್ದರಾಮಯ್ಯ ಎಂದರೆ ಕಾಂಗ್ರೆಸ್ ಶಕ್ತಿ. ಅವರ ರಾಜೀನಾಮೆ ನಿರ್ಧಾರವನ್ನು ಪ್ರಶ್ನಿಸುವ ನಾಯಕರು ನಾವಲ್ಲ. ಅವರ ರಾಜೀನಾಮೆ ವಿಚಾರದಲ್ಲಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡುತ್ತೇವೆ. ಸಿದ್ದರಾಮಯ್ಯ ತಮ್ಮ ನಿರ್ಧಾರಕ್ಕೆ ಅಚಲವಾಗಿದ್ದಾರೆ. ಅವರು ನೈತಿಕವಾಗಿ ಸರಿಯಾದ ನಿರ್ಧಾರವನ್ನೇ ತೆಗೆದು ಕೊಂಡಿದ್ದಾರೆ. ಹೈಕಮಾಂಡ್ ಅವರ ಮನವೊಲಿಸಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.

ಐವಾನ್ ಡಿಸೋಜಾ ಮಾತನಾಡಿ, ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಸೋಲಿಗೆ ಅವರೊಬ್ಬರೇ ಕಾರಣರಲ್ಲ. ನಾವೆಲ್ಲರೂ ಉಪ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡಿದ್ದೇವೆ. ಸೋಲಿಗೆ ಎಲ್ಲರೂ ಜವಾಬ್ದಾರರೇ ಸಿದ್ದರಾಮಯ್ಯ ಅವರೊಬ್ಬರೆ ಕಾರಣರಲ್ಲ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಬಗ್ಗೆ ಗೊತ್ತಿದೆ. ಹಿರಿಯ ನಾಯಕ ಎಸ್. ಆರ್ ಪಾಟೀಲ್ ಸೇರಿದಂತೆ ಎಲ್ಲಾ ನಾಯಕರು ಅವರ ಮನ ವೊಲಿಸಿದ್ದೇವೆ, ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದು ಅವರಿಗೆ ತಿಳಿಸಿದ್ದೇವೆ ಎಂದರು.

ಕೆಲ ನಾಯಕರು ಸಿದ್ದರಾಮಯ್ಯ ವಿರುದ್ಧ ಹೈ ಕಮಾಂಡ್ ಗೆ ದೂರು ನೀಡಿದ ವಿಚಾರದ ಬಗ್ಗೆ ತಮಗೆ ಗೊತ್ತಿಲ್ಲ. ತಾವು ಅವರನ್ನು ಸುಮಾರು1985 ರಿಂದ ನೋಡುತ್ತಾ ಬಂದಿದ್ದು ತಮಗೂ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದರು.

ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ತಮ್ಮ ನಾಯಕರಾಗಿರುವ ಸಿದ್ದರಾಮಯ್ಯ ಅವರ ಭೇಟಿಗೆ ಕಾರಣಬೇಕಿಲ್ಲ.
ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಪಕ್ಷದ ಹಿರಿಯ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ಉಪಚುನಾವಣೆಯಲ್ಲಿ ಜನತೆಯ ತೀರ್ಮಾನ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಸೋತ ಅಭ್ಯರ್ಥಿಗಳ ವಿಚಾರ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ.
ಸೋಲಿನ ಕಾರಣಕ್ಕೆ ಇನ್ನೂ ಸ್ವಲ್ಪ ಸಮಯಬೇಕಾಗಿದೆ. ಕೆ ಆರ್ ಪೇಟೆ ಸೋಲಿನ ವಿಚಾರ ಜನರೇ ಸುಪ್ರೀಂ ಆಗಿ ತೀರ್ಮಾನ ಮಾಡಿರುವುದನ್ನು ನಾವು ಪ್ರಶ್ನೆ ಮಾಡಬೇಕಾಗಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com