ಮಂಗಳೂರು: ಗುರುವಾರ ನಡೆದ ಪೊಲೀಸ್ ಗೋಲಿಬಾರ್ ಹಿಂದೆ ರಾಜಕೀಯ ಕೈವಾಡ ಇರುವ ಶಂಕೆ ಇದೆ ಎಂಬ ಅನುಮಾನ ಕಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಗೋಲಿಬಾರ್ನಲ್ಲಿ ಮೃತಪಟ್ಟವರ ಮನೆಗೆ ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾತನಾಡಿದ ಅವರು, ‘ರಾಜಕೀಯ ಹಸ್ತಕ್ಷೇಪದಿಂದಲೇ ಈ ಗೋಲಿಬಾರ್ ನಡೆದಿದೆ. ಇದು ಸರ್ಕಾರಿ ಪ್ರಾಯೋಜಿತ ಗೋಲಿಬಾರ್’ ಎಂದು ಆರೋಪಿಸಿದರು.
ಸತ್ತವರು ಮುಸ್ಲಿಮರಾದ ಮಾತ್ರಕ್ಕೆ ಸ್ಥಳೀಯ ಬಿಜೆಪಿ ಸಂಸದರು ಮತ್ತು ಶಾಸಕರು ಅವರ ಕುಟುಂಬಗಳನ್ನು ಭೇಟಿ ಮಾಡಬಾರದೇ? ಇವರ ಮನಸ್ಥಿತಿಯನ್ನು ಗಮನಿಸಿದರೆ ಇಡೀ ಘಟನೆಯ ಹಿಂದೆ ರಾಜಕೀಯ ಕೈವಾಡ ಇದೆ ಎಂಬ ಬಲವಾದ ಅನುಮಾನ ಮೂಡುತ್ತದೆ ಎಂದರು.
ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧದ ಪ್ರತಿಭಟನೆಗೆ ಬೆಂಗಳೂರಿನಲ್ಲಿ ಒಂದು ಲಕ್ಷ ಜನರು ಸೇರಿದ್ದರು. ಅಲ್ಲಿ ಯಾವುದೇ ಗಲಭೆ ನಡೆದಿಲ್ಲ. ಮಂಗಳೂರಿನಲ್ಲಿ ಪ್ರತಿಭಟನೆಗೆ ಜನರು ಬರುತ್ತಿದ್ದಂತೆಯೇ ಲಾಠಿ ಪ್ರಹಾರ ನಡೆಸಿದ ಪೊಲೀಸರು ಗಲಭೆಗೆ ಪ್ರಚೋದಿಸಿದರು. ತಪ್ಪು ಮುಚ್ಚಿಕೊಳ್ಳಲು ಈಗ ಕಟ್ಟುಕತೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement