ಸಿಎಂ ವಿದೇಶ ಪ್ರವಾಸ: ವಿಧಾನಸಭೆ ಅಧಿವೇಶನ ಮುಂದೂಡಿಕೆ; ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ?
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸ ತೆರಳುತ್ತಿರುವ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ನಡೆಯಬೇಕಿದ್ದ ಜಂಟಿ ಅಧಿವೇಶನವನ್ನು ಮುಂದೂಡಲಾಗುತ್ತದೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಅವರು ಜನವರಿ 21ರಿಂದ 25ರವರೆಗೆ ಸ್ವಿಟ್ಜರ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದಾರೆ. ಸ್ವಿಟ್ಜರ್ಲೆಂಡ್ನಲ್ಲಿ ನಡೆಯಲಿರುವ ಆರ್ಥಿಕ ಸಮ್ಮೇಳನದಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ಈ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ. ಸಿಎಂ ಅವರ ಸ್ವಿಟ್ಜರ್ಲೆಂಡ್ ಪ್ರವಾಸದಿಂದಾಗಿ ಜನವರಿ 20ರಂದು ನಿಗದಿಯಾಗಿದ್ದ ಜಂಟಿ ಅಧಿವೇಶನವನ್ನು ಜನವರಿ 27ಕ್ಕೆ ಮುಂದೂಡಲಾಗುವುದು, ಈ ಸಂಬಂಧ ಡಿಸೆಂಬರ್ 30 ರ್ದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಬಿಜೆಪಿ ಸರ್ಕಾರ ಮೊದಲು ಜನವರಿ 20ರಂದು ಜಂಟಿ ಅಧಿವೇಶನ ನಡೆಸಲು ತೀರ್ಮಾನ ಮಾಡಿತ್ತು. ಬಳಿಕ ಜನವರಿ 27ರಂದು ಅಧಿವೇಶನ ಪ್ರಾರಂಭಿಸಲು ಬಿಎಸ್ವೈ ಚಿಂತನೆ ನಡೆಸಿದ್ದರು. ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಜನವರಿ 20ರಿಂದ 30ನೇ ತಾರೀಖಿನವರೆಗೆ ಅಧಿವೇಶನ ನಡೆಸಲು ನಿರ್ಧಾರ ಮಾಡಲಾಗಿತ್ತು. ಅಂದರೆ ಜನವರಿ 27ರಿಂದ 10 ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು.
ಸಿಎಂ ವಿದೇಶ ಪ್ರವಾಸದಿಂದಾಗಿ ಕೇವಲ ಅಧಿವೇಶನ ಮಾತ್ರ ಮುೂಂದೂಡುತ್ತಿಲ್ಲ ಸಚಿವ ಸಂಪು ವಿಸ್ತರಣೆಯನ್ನು ಸಹ ಮುಂದೂಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.