ಬೆಂಗಳೂರಿನಲ್ಲಿ 19 ಶತಕೋಟಿ ಡಾಲರ್‌ ಮೌಲ್ಯದ ಸ್ಟಾರ್ಟ್‌ಅಪ್‌ಗಳು: ರಾಜ್ಯ ಸರ್ಕಾರ

ರಾಜಧಾನಿ ಬೆಂಗಳೂರು ಸ್ಟಾರ್ಟ್‌ಅಪ್‌ ರಾಜಧಾನಿಯಾಗಿ ಪ್ರಗತಿ ಸಾಧಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ 19 ಶತಕೋಟಿ ಡಾಲರ್‌ ಮೌಲ್ಯದ ಸ್ಟಾರ್ಟ್‌ಅಪ್‌ಗಳಿವೆ ಎಂದು ರಾಜ್ಯಪಾಲ ವಜೂಭಾಯಿವಾಲಾ ಹೇಳಿದ್ದಾರೆ.
ವಜುಭಾಯ್ ವಾಲಾ
ವಜುಭಾಯ್ ವಾಲಾ
ಬೆಂಗಳೂರು: ರಾಜಧಾನಿ ಬೆಂಗಳೂರು ಸ್ಟಾರ್ಟ್ ಅಪ್ ರಾಜಧಾನಿಯಾಗಿ ಪ್ರಗತಿ ಸಾಧಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ 19 ಶತಕೋಟಿ ಡಾಲರ್‌ ಮೌಲ್ಯದ ಸ್ಟಾರ್ಟ್‌ಅಪ್‌ಗಳಿವೆ ಎಂದು ರಾಜ್ಯಪಾಲ ವಜೂಭಾಯಿವಾಲಾ ಹೇಳಿದ್ದಾರೆ.
ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, ನೂತನ ತಂತ್ರಜ್ಞಾನ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಆರಂಭದಿಂದಲೇ ಕ್ರಮ ತೆಗೆದುಕೊಳ್ಳುತ್ತಿದ್ದು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೈಗಾರಿಕೆ ಕಾರ್ಯನೀತಿ ಮತ್ತು ಅನುಷ್ಠಾನ ಇಲಾಖೆಯ ವನೋದ್ಯಮಗಳ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ರಾಜ್ಯ ಸರ್ಕಾರ ಮತ್ತು ಬೃಹತ್‌ ಕೈಗಾರಿಕಾ ವಲಯದ ಮೂಲಕ ಸ್ಟಾರ್ಟ್ ಅಪ್ ಗಳಿಗೆ ರಾಜ್ಯದಲ್ಲಿ ಸೂಕ್ತ ಬೆಂಬಲ ಒದಗಿಸಲಾಗುತ್ತಿದೆ. ಬರುವ 2025ರ ವೇಳೆಗೆ ರಾಜ್ಯದಲ್ಲಿನ ನವ್ಯೋದ್ಯಮಗಳ ಸಂಖ್ಯೆ 20,000 ಕ್ಕೆ ತಲುಪುವ ನಿರೀಕ್ಷೆಯಿದೆ. ಅಮೆರಿಕ, ಇಂಗ್ಲೆಂಡ್‌, ಇಸ್ರೇಲ್‌, ಫ್ರಾನ್ಸ್‌ ಮತ್ತು ಜಪಾನ್‌ನಂಥ ಮುಂಚೂಣಿ ದೇಶಗಳ ನವೋದ್ಯಮಗಳೊಂದಿಗೆ ಸಹಭಾಗಿತ್ವ ಸಾಧಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದಿದ್ದಾರೆ.
ನವ್ಯೋದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 58 ಕರ್ನಾಟಕ ತಂತ್ರಜ್ಞಾನ(ಕೆ-ಟೆಕ್‌) ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಬಹುತೇಕ ಕೇಂದ್ರಗಳು ದ್ವಿತೀಯ ದರ್ಜೆ ನಗರಗಳಲ್ಲಿವೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ರಾಜ್ಯ ಸಾರಿಗೆ ವ್ಯವಸ್ಥೆ ಬಲವರ್ಧನೆಗೆ ಕ್ರಮ: ರಾಜ್ಯಪಾಲ ವಜೂಭಾಯಿ ವಾಲಾ
ರಾಜಧಾನಿ ಬೆಂಗಳೂರಿನಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಆದ್ಯತೆ ನೀಡಿದ್ದು,  ನಾಗವಾರ ಮೆಟ್ರೋ ನಿಲ್ದಾಣದಿಂದ ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಎರಡನೇ ಹಂತದ ಬಿ  ಯೋಜನೆಯನ್ನು ಕೈಗೊಂಡು ಪೂರ್ಣಗೊಳಿಸಲು ಸರ್ಕಾರ ವಿಶೇಷ ಗಮನಹರಿಸಿದೆ ಎಂದು ರಾಜ್ಯಪಾಲ  ವಜೂಭಾಯಿವಾಲಾ ತಿಳಿಸಿದ್ದಾರೆ.
ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಉಭಯ ಸದನಗಳ  ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯನ್ನು  ಬಲಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ಚತುರ  ಸಂಚಾರಿ ನಿರ್ವಹಣಾ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯ ರಸ್ತೆ ಸಾರಿಗೆ  ಸಂಸ್ಥೆಯ ವಾಹನಗಳಿಗೆ ಚತುರ ಸಾರಿಗೆ ವ್ಯವಸ್ಥೆ ಅಳವಡಿಕೆ, ನಗದು ರಹಿತ ವ್ಯವಹಾರಕ್ಕಾಗಿ  ಪಾಯಿಂಟ್ ಆಫ್ ಸೇಲ್ (ಪಿಓಎಸ್‌) ಯಂತ್ರಗಳ ಬಳಕೆ ಆರಂಭಿಸಲಾಗಿದೆ. ಹೆಚ್ಚುವರಿ ಬಸ್‌ಗಳ  ಸೇರ್ಪಡೆ ಜೊತೆಗೆ ಡಿಪೋ ಮತ್ತು ಬಸ್ ಟರ್ಮಿನಲ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ  ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅನುಸೂಚಿತ ಜಾತಿ  ಮತ್ತು ಅನುಸೂಚಿತ ಪಂಗಡಗಳ 3.98 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಸೇರಿದಂತೆ  15.53 ಲಕ್ಷ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಲಾಗಿದೆ. ಕೇವಲ  ಸಾರಿಗೆ ಮಾತ್ರವಲ್ಲದೇ ಇಡೀ ನಗರವನ್ನು ಸ್ಮಾರ್ಟ್ ಆಗಿಸಲು 26 ನಗರ ಸ್ಥಳೀಯ  ಸಂಸ್ಥೆಗಳಲ್ಲಿ ಆನ್‌ಲೈನ್ ಸ್ವಯಂ ಚಾಲಿತ ಕಟ್ಟಡ ನಕ್ಷೆ ಅನುಮೋದನಾ ವ್ಯವಸ್ಥೆ  ಜಾರಿಗೊಳಿಸಲಾಗಿದ್ದು, ಇದನ್ನು ಶೀಘ್ರವೇ ರಾಜ್ಯಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ  ಎಂದು ಅವರು ಹೇಳಿದ್ದಾರೆ. 
ಹುಬ್ಬಳ್ಳಿ – ಧಾರವಾಡ, ಮಂಗಳೂರು, ದಾವಣಗೆರೆ, ಬೆಳಗಾವಿ  ಹಾಗೂ ತುಮಕೂರು ಸ್ಮಾರ್ಟ್ ಸಿಟಿಗಳಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಆನ್‌ಲೈನ್  ಸೇವೆಗಳನ್ನು ಏಕೀಕೃತಗೊಳಿಸಲು ನಿರ್ದೇಶನ ಮತ್ತು ನಿಯಂತ್ರಣ (ಕಮ್ಯಾಂಡ್ ಮತ್ತು  ಕಂಟ್ರೋಲ್) ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಬೆಂಗಳೂರು ನಗರದಲ್ಲಿ ಉಪನಗರ  ರೈಲು ಸಂಪರ್ಕ ಸೌಲಭ್ಯ ಹೆಚ್ಚಿಸಲು ರೈಲ್ವೆ ಸಚಿವಾಲಯದೊಂದಿಗೆ ಸ್ಪೆಷಲ್ ಪರ್ಪಸ್  ವೆಹಿಕಲ್ ಸ್ಥಾಪಿಸಲು ಸಹ ಉದ್ದೇಶಿಸಲಾಗಿದೆ ಎಂದು ರಾಜ್ಯಪಾಲರು ತಮ್ಮ  ಭಾಷಣದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com