ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನಕ್ಕೆ ಹಾಜರಾಗುವಂತೆ ವಿಪ್ ನೀಡಿದ್ದರು ಕೆಲ ಶಾಸಕರ ಗೈರು ಕಾಂಗ್ರೆಸ್ ಗೆ ದೊಡ್ಡ ತಲೆ ನೋವಾಗಿದೆ, ಹೀಗಾಗಿ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷ ಈ ಶಾಸಕರಿಗೆ ನೊಟೀಸ್ ನೀಡಿದೆ.
ಸಂಪುಟ ಪುನಾರಚನೆ ವೇಳೆ ಅಸಮಾಧಾನ ಗೊಂಡಿದ್ದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ,ಉಮೇಶ್ ಜಾಧವ್ ಮತ್ತು ಬಿ. ನಾಗೇಂದ್ರ ಹಾಗೂ ಬಿ.ಸಿ ಪಾಟೀಲ್ ಅಧಿವೇಶನದ ಮೊದಲ ದಿನವೇ ಗೈರಾಗಿದ್ದರು, ಹೀಗಾಗಿ ಅವರಿಗೆ ನೊಟೀಸ್ ನೀಡಲಾಗಿದೆ,
ಇದರ ಜೊತೆಗೆ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆಎನ್ ಗಣೇಶ್ ಕೂಡ ಸದನಕ್ಕೆ ಗೈರಾಗಿದ್ದರು, ಈ ಗೈರಿನ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆಲ್ಲಾ 2ನೇ ಬಾರಿ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಶಾಸಕರ ಗೈರು ಹಾಗೂ ಬಿಜೆಪಿ ಡೀಲ್ ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಇದಕ್ಕಾಗಿ ನಾವು ಮತ್ತೊಂದು ತಂತ್ರ ರೂಪಿಸಿದ್ದೇವೆ, ಆದರೆ ಅದನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ,
ಆದರೆ ಉಮೇಶ್ ಜಾಧವ್ ಮತ್ತು ಬಿ.ನಾಗೇಂದ್ರ ಅವರನ್ನ ವಾಪಾಸ್ ಕರೆತರುವ ವಿಶ್ವಾಸ ವ್ಯಕ್ತ ಪಡಿಸಿದೆ, ಧನ ವಿಧೇಯಕ ಮಸೂದೆ ಮಂಡನೆಗೆ ,ಅನುಮತಿ ನೀಡಲು ಶಾಸಕರ ಕೊರತೆ ಇರುತ್ತದೆ, ಇದಕ್ಕೆ ಏನು ಯೋಜನೆ ರೂಪಿಸಿದ್ದೀರಿ ಎಂಬ ಪ್ರಶ್ನಗೆ ಉತ್ತರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಮಗೆ ಅಗತ್ಯ ಸಂಖ್ಯೆ ನಂಬರ್ ಸಿಗುತ್ತದೆ ಎಂದು ಹೇಳಿದ್ದಾರೆ.