ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎಂಬ ಸೂಚನೆಯನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ .ಡಿ. ದೇವೇಗೌಡ ಅವರು ಗುರುವಾರ ಲೋಕಸಭೆಯಲ್ಲಿ ನೀಡಿದ್ದಾರೆ.
ಇಂದು ರಾಷ್ಟ್ರಪತಿಗಳ ಭಾಷಣ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ 86 ವರ್ಷದ ಮಾಜಿ ಪ್ರಧಾನಿ, ಲೋಕಸಭೆಯಲ್ಲಿ ಇದು ನನ್ನ ಕೊನೆಯ ಭಾಷಣವಾಗಬಹುದು ಎಂದರು.
ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ದೇವೇಗೌಡರು 1996-1997ರಲ್ಲಿ ಸಂಯುಕ್ತ ರಂಗ ಸರ್ಕಾರದ ನಾಯಕತ್ವ ವಹಿಸಿದ್ದರು.
13 ದಿನಗಳ ವಾಜಪೇಯಿ ಸರ್ಕಾರದ ನಂತರ ಬಂದ ಸಂಯುಕ್ತ ರಂಗ ಸರ್ಕಾರದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರು.
ಕಾಂಗ್ರೆಸ್ ಮತ್ತು ಎಡಪಕ್ಷಗಳು ಬಾಹ್ಯ ಬೆಂಬಲ ನೀಡಿದ್ದ ಅಂದಿನ ಯುನೈಟೆಡ್ ಫ್ರಂಟ್ ಮೈತ್ರಿಕೂಟ ಬೆಂಬಲಿಸಿದ್ದ ಮೈತ್ರಿಕೂಟ ಪಕ್ಷಗಳಿಗೆ ದೇವೇಗೌಡರು ಭಾಷಣದಲ್ಲಿ ಧನ್ಯವಾದ ಸಲ್ಲಿಸಿದರು.
ಎಡಪಕ್ಷಗಳ ಅತ್ಯಂತ ಹಿರಿಯ ನಾಯಕ ಜ್ಯೋತಿ ಬಸು ಅವರಿಗೆ ಪ್ರಧಾನ ಮಂತ್ರಿಯಾಗಲು ಸಿಪಿಐ-ಎಂ ಪಾಲಿಟ್ ಬ್ಯೂರೊ ಒಪ್ಪಿಗೆ ಸೂಚಿಸದ ಕಾರಣ ಪ್ರಧಾನಿಯಾಗುವ ಯೋಗ ದೇವೇಗೌಡರಿಗೆ ಒಲಿದುಬಂದಿತ್ತು. 1933ರ ಮೇ 18ರಂದು ಜನಿಸಿರುವ ದೇವೇಗೌಡರು 1994ರಿಂದ 1996ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
ಪ್ರಸ್ತುತ ಜನತಾದಳ( ಜಾತ್ಯತೀತ) ರಾಜ್ಯದಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿಕೂಟ ಸರ್ಕಾರ ನಡೆಸುತ್ತಿದ್ದು. ಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಖ್ಯಮಂತ್ರಿಯಾಗಿದ್ದಾರೆ.
ಸಂಯುಕ್ತ ರಂಗ ಸರ್ಕಾರದ ಪ್ರಧಾನಿ ಹುದ್ದೆಯನ್ನು ಜ್ಯೋತಿ ಬಸು ತಮ್ಮ ಹೆಸರು ಸೂಚಿಸಿದ ಕಾರಣದಿಂದ ಮಾತ್ರವೇ ಹಿಂಜರಿಕೆಯಿಂದ ವಹಿಸಿಕೊಂಡಿದ್ದೆ ಎಂದು ದೇವೇಗೌಡರು ತಿಳಿಸಿದರು.