ಏಳು ದಿನಗಳ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆದದ್ದು ಕೇವಲ 15 ಗಂಟೆಗಳು!

ರಾಜ್ಯ ಸಮ್ಮಿಶ್ರ ಸರ್ಕಾರದ ಏಳು ದಿನಗಳ ಬಜೆಟ್ ಅಧಿವೇಶನ ಮುಕ್ತಾಯವಾಗಿದೆ. ರಾಜ್ಯದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ನೂರಾರು ಸಮಸ್ಯೆಗಳಿವೆ, 150ಕ್ಕೂ ಹೆಚ್ಚು ತಾಲ್ಲೂಕುಗಳು ...
ಕಲಾಪ ಮುಕ್ತಾಯದ ನಂತರದ ದೃಶ್ಯ
ಕಲಾಪ ಮುಕ್ತಾಯದ ನಂತರದ ದೃಶ್ಯ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಏಳು ದಿನಗಳ ಬಜೆಟ್ ಅಧಿವೇಶನ ಮುಕ್ತಾಯವಾಗಿದೆ. ರಾಜ್ಯದಲ್ಲಿ ಕೃಷಿಗೆ ಸಂಬಂಧಪಟ್ಟಂತೆ ನೂರಾರು ಸಮಸ್ಯೆಗಳಿವೆ, 150ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿವೆ. ಆದರೆ ಇವಾವುದೂ ಸರ್ಕಾರದ ಜನಪ್ರತಿನಿಧಿಗಳಲ್ಲಿ ಬಾಯಲ್ಲಿ ಅಧಿವೇಶನದಲ್ಲಿ ಚರ್ಚೆಗೆ ಬರಲೇ ಇಲ್ಲ.
ನಿನ್ನೆ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇಂದು ಅಧಿವೇಶನ ಕೊನೆಗೊಳ್ಳಬೇಕಾಗಿತ್ತು. 7 ದಿನಗಳ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆದದ್ದು 15 ಗಂಟೆ 10 ನಿಮಿಷಗಳು ಮಾತ್ರ ಅದರಲ್ಲಿ ಮೂರೂವರೆ ಗಂಟೆ ಮುಖ್ಯಮಂತ್ರಿಗಳ ಭಾಷಣ ಇದ್ದಿತು.
ಈ ಬಾರಿಯ ಕಲಾಪವನ್ನು ಇಡೀ ನುಂಗಿ ಹಾಕಿದ್ದು ಆಡಿಯೊ ಟೇಪ್ ವಿವಾದ. ಇದು ಉಭಯ ಸದನಗಳಲ್ಲಿ ತೀವ್ರ ಕೋಲಾಹಲ, ಗದ್ದಲ ಎಬ್ಬಿಸಿತ್ತು. ಮೈತ್ರಿ ಸರ್ಕಾರದ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಲು ಬಿಜೆಪಿ ಹೊರಟಿದೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಅವರ ಮಾತುಗಳು ಎನ್ನಲಾದ ಆಡಿಯೊವನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ಮಂಡನೆಯ ದಿನ ಬಿಡುಗಡೆ ಮಾಡಿದ ನಂತರ ಸದನದಲ್ಲಿ ಇಷ್ಟು ದಿನಗಳ ಕಾಲ ಗದ್ದಲ, ಕೋಲಾಹಲಗಳೇ ಕೇಳಿಬಂದವು.
ಹಣಕಾಸು ಮಸೂದೆ ಸೇರಿದಂತೆ 9 ಮಸೂದೆಗಳು ಈ ಗದ್ದಲಗಳ ನಡುವೆಯೇ ಅನುಮೋದನೆಯಾದವು. ಆದರೆ ಅವುಗಳ ಮೇಲೆ ಚರ್ಚೆಗಳಾಗಿಲ್ಲ. ಏಳು ದಿನಗಳಲ್ಲಿ ಪ್ರತಿ ದಿನ ಕಲಾಪ ನಡೆದದ್ದು ಸುಮಾರು ಎರಡೂವರೆ ಗಂಟೆಗಳು ಮಾತ್ರ.
ನನ್ನ ಪ್ರಕಾರ ಇಡೀ ಕಲಾಪ ವ್ಯರ್ಥವಾಯಿತು. ನಮ್ಮಲ್ಲಿ ಆರ್ಥಿಕ ಮತ್ತು ಕೃಷಿ ಸಮಸ್ಯೆ ಬೇಕಾದಷ್ಟಿದೆ. ಆದರೆ ಶಾಸಕರು ಅವುಗಳ ಬಗ್ಗೆ ಚರ್ಚೆ ನಡೆಸಿಲ್ಲ. ಜನಪ್ರತಿನಿಧಿಗಳು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳುವುದರಲ್ಲಿಯೇ ನಿರತರಾಗಿದ್ದಾರೆ. ಈ ರಾಜ್ಯದ ಜನತೆಗೆ ಅವರು ಏನು ಹೇಳಲು ಹೊರಟಿದ್ದಾರೆ ಎಂದು ಕೇಳುತ್ತಾರೆ ರಾಜಕೀಯ ವಿಶ್ಲೇಷಕ ಪ್ರೊ ಹರೀಶ್ ರಾಮಸ್ವಾಮಿ.
ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಬೆದರಿಕೆ ತಂತ್ರಗಳು ಮತ್ತು ಒಬ್ಬರು ಮತ್ತೊಬ್ಬರ ಮೇಲೆ ಆಪಾದನೆ, ಆರೋಪ ಮಾಡುವುದರಲ್ಲಿಯೇ ಹೆಚ್ಚಿನ ಸಮಯ ಕಳೆದರು ಎನಿಸುತ್ತದೆ ಎಂದರು.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಬೇಸರ ತರಿಸುತ್ತದೆ. ನಮ್ಮ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಕಡೆಗಣಿಸಿದಂತೆ. ಸರ್ಕಾರ ರಾಜ್ಯದ ಸಮಸ್ಯೆಗಳು ಮತ್ತು ಅಗತ್ಯಗಳ ಕುರಿತು ಚರ್ಚೆ ಮಾಡುವುದರಲ್ಲಿ ಒಲವು ಹೊಂದಿತ್ತು. ಆದರೆ ಪ್ರತಿಪಕ್ಷವಾದ ಬಿಜೆಪಿ ಸರ್ಕಾರವನ್ನು ಅಸಂವಿಧಾನಿಕ ಮಾರ್ಗಗಳ ಮೂಲಕ ಅಸ್ಥಿರಗೊಳಿಸಲು ನೋಡುತ್ತಿದ್ದು ಯಾವುದರ ಬಗ್ಗೆಯೂ ಚರ್ಚೆ ಮಾಡಲು ಒಲವು ಹೊಂದಿಲ್ಲ ಎಂದು ಬಿಜೆಪಿಯ ಮೇಲೆ ಬೆರಳು ತೋರಿಸಿ ಹೇಳುತ್ತಾರೆ ದಿನೇಶ್ ಗುಂಡೂರಾವ್. ಸದನದಲ್ಲಿ ಅಗತ್ಯವಾಗಿ ಚರ್ಚಿಸುವ ಹಲವು ವಿಷಯಗಳಿದ್ದವು ಎನ್ನುತ್ತಾರೆ ಅವರು.
ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ರಾಜ್ಯಪಾಲ ವಜುಭಾಯಿ ವಾಲಾ ಮೊದಲ ದಿನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದ ಭಾಷಣವನ್ನು ಮುಂದುವರಿಸಲಾಗದೆ 2 ಪುಟ ಓದಿ ಮೊಟಕುಗೊಳಿಸಿ ಹೋದರು. ಅಲ್ಲಿಂದ ಆರಂಭವಾದ ಪ್ರತಿಭಟನೆ, ಗದ್ದಲ ನಿನ್ನೆಯವರೆಗೂ ನಿಲ್ಲಲಿಲ್ಲ.
ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಹಲ್ಲೆ ಬಿಜೆಪಿಗರ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿತು. ರೇಪ್ ಸಂತ್ರಸ್ತೆಯಂತೆ ಎಂದು ಸ್ಪೀಕರ್ ನೀಡಿದ ಹೇಳಿಕೆ, ರಾಜ್ಯಪಾಲರಿಗೆ ಬಿಜೆಪಿ ದೂರು ಸಲ್ಲಿಕೆ ಇತ್ಯಾದಿಗಳಿಂದ ಅಧಿವೇಶನ ಹೆಚ್ಚು ಸುದ್ದಿಯಾಯಿತು.
ರಾಜ್ಯದ ಪ್ರಗತಿ ಬಗ್ಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಬಜೆಟ್ ಅಧಿವೇಶನ ಅರ್ಥಬದ್ಧವಾಗಿ ನಡೆಯಬೇಕು. ಸರ್ಕಾರ ನಮ್ಮನ್ನು ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಡೆಸಿಕೊಳ್ಳಲಿಲ್ಲ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆರೋಪಿಸಿದರು.
ಸಂಸತ್ತಿನ ಮತ್ತು ರಾಜ್ಯ ವಿಧಾನ ಮಂಡಲಗಳ ಕಲಾಪ ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಅದು ಸಾರ್ವಜನಿಕರು ತೆರಿಗೆ ರೂಪದಲ್ಲಿ ನೀಡುವ ಹಣವನ್ನು.ಹೀಗಿರುವಾಗ ಜನರಿಗೆ ಉಪಯೋಗವಾಗುವಂತಹ ಕಲಾಪಗಳು ಸದನದಲ್ಲಿ ನಡೆಯಬೇಕಲ್ಲವೇ ಎಂಬುದು ಸಾಮಾನ್ಯ ಜನತೆಯ ಪ್ರಶ್ನೆಯಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com