ಜೆಡಿಎಸ್ ಮಂಡ್ಯ ತೆಗೆದುಕೊಂಡರೆ, ನಮಗೆ ಹಾಸನ ಬೇಕು: ಕಾಂಗ್ರೆಸ್ ಮಾಜಿ ಶಾಸಕರು

ನಿಗಮ ಮಂಡಳಿ ನೇಮಕ ಬೆನ್ನಲ್ಲೇ ಸಭೆ ನಡೆಸಿರುವ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಪಾಳಯದ ಮಾಜಿ ಶಾಸಕರು, ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಿಗಮ ಮಂಡಳಿ ನೇಮಕ ಬೆನ್ನಲ್ಲೇ ಸಭೆ ನಡೆಸಿರುವ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಪಾಳಯದ ಮಾಜಿ ಶಾಸಕರು, ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ. 
ಮಾಜಿ ಸಚಿವ ಎ.ಮಂಜು ನಿವಾಸದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಹೆಚ್.ಸಿ. ಮಹದೇವಪ್ಪ, ಚೆಲುವರಾಯಸ್ವಾಮಿ ಸೇರಿ ಸಾಕಷ್ಟು ಮಾಜಿ ಕಾಂಗ್ರೆಸ್ ಶಾಸಕರು ಪಾಲ್ಗೊಂಡಿದ್ದರು. 
ಮೈತ್ರ ಸರ್ಕಾರದಲ್ಲಿ ಜೆಡಿಎಸ್ ದಬ್ಬಾಳಿಕೆ ಹೆಚ್ಚುತ್ತಿರುವ ಬಗ್ಗೆ ಚರ್ಚೆ ನಡೆಸಿದ ಮಾಜಿ ಶಾಸಕರು ಲೋಕಸಭೆ ಚುನಾವಣೆ ಮೈತ್ರಿ ಬಗ್ಗೆ ಮರು ಪರಮಾರ್ಶೆ ಮಾಡುವಂತೆ ಪಕ್ಷದ ನಾಯಕರಿಗೆ ಆಗ್ರಹಿಸಲು ಸಭೆಯಲ್ಲಿ ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ. 
ಮೈತ್ರಿ ಅನಿವಾರ್ಯವೆನಿಸಿದರೆ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಸಂಸದರಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಇತರೆ ಕ್ಷೇತ್ರಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಡಬಾರದು ಎಂಬ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 
ಹಾಸನ ಹಾಗೂ ಮಂಡ್ಯ ಎರಡೂ ಜಿಲ್ಲೆಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಬಲಿಷ್ಟವಾಗಿದೆ. ಜೆಡಿಎಸ್'ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದೇ ಆದರೆ, ಹಾಸನ ಕಾಂಗ್ರೆಸ್'ಗೆ ಸೇರಬೇಕಾದದ್ದು ನ್ಯಾಯಯುತವಾದದ್ದು ಎಂದು ಎ.ಮಂಜು ಅವರು ಹೇಳಿದ್ದಾರೆ. 
ನಟ ಅಂಬರೀಷ್ ಅವರ ನಿಧನ ಹೊಂದಿದ ಹಿನ್ನಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಅವರ ಪುತ್ರ ಅಭಿಷೇಕ್ ಅವರಿಗೆ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಮಂಜು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com