ಬೇರೆ ಹುದ್ದೆ ಬೇಡ, ಮುಂದೆ ಏನು ಮಾಡಬೇಕೋ ತೀರ್ಮಾನ ಮಾಡುತ್ತೇನೆ: ಶಾಸಕ ಸುಧಾಕರ್

ಮಾಲಿನ್ಯ ನಿಯಂತ್ರಣ ಮಂಡಳಿ ನಿಗಮ ಅಧ್ಯಕ್ಷ ಸ್ಥಾನ ಕೈತಪ್ಪಿ ಹೋಗಿದ್ದಕ್ಕೆ ಚಿಕ್ಕಬಳ್ಳಾಪುರ ಶಾಸಕ ...
ಶಾಸಕ ಡಾ ಸುಧಾಕರ್
ಶಾಸಕ ಡಾ ಸುಧಾಕರ್

ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿ ನಿಗಮ ಅಧ್ಯಕ್ಷ ಸ್ಥಾನ ನೀಡದಿರುವುದಕ್ಕೆ ಚಿಕ್ಕಬಳ್ಳಾಪುರ ಶಾಸಕ ಡಾ ಸುಧಾಕರ್ ತೀವ್ರ ಅಸಮಾಧಾನಗೊಂಡಿದ್ದಾರೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನೀಡಿರುವ ಸಲಹೆಯಂತೆ ನಿನ್ನೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಹೊರತುಪಡಿಸಿ ಎಲ್ಲಾ ನಿಗಮ ಮಂಡಳಿಗಳ ಅಧ್ಯಕ್ಷರ ಹುದ್ದೆಗಳಿಗೆ ಸಹಿ ಹಾಕಿದ್ದಾರೆ. ಆದರೆ ಸುಧಾಕರ್ ನೇಮಕಾತಿಯನ್ನು ಇನ್ನೂ ಅನುಮೋದಿಸಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಸುಧಾಕರ್ , ಹೈಕಮಾಂಡ್ ಅವರ ಬಳಿ ಸಮಸ್ಯೆ ಹೇಳಿಕೊಳ್ಳುತ್ತೇನೆ, ನನ್ನ ಪರವಾಗಿ ನಿಲ್ಲದಿದ್ದರೆ ನಾನೇ ಮುಂದಿನ ಹೋರಾಟ ನಡೆಸಬೇಕಾಗುತ್ತದೆ ಈ ಬಗ್ಗೆ ಇದೇ 14ರಂದು ವಿಧಾನ ಸೌಧದಲ್ಲಿ ಘೋಷಿಸುವುದಾಗಿ ಹೇಳಿದರು. ನಾನ್ಯಾಕೆ ಬೇರೆ ನಿಗಮ ಮಂಡಳಿಯನ್ನು ಒಪ್ಪಿಕೊಳ್ಳಲಿ, ಅವರು ಘೋಷಿಸಿದ ಹುದ್ದೆಯನ್ನೇ ನನಗೆ ನೀಡಬೇಕು ಎಂದು ಸುಧಾಕರ್ ಪಟ್ಟುಹಿಡಿದಿದ್ದಾರೆ.

ಎನ್ ಎ ಹ್ಯಾರಿಸ್ ಅವರನ್ನು ಬಿಎಂಆರ್ ಟಿಸಿ ಮತ್ತು ಎಸ್ ಟಿ ಸೋಮಶೇಖರ್ ಅವರನ್ನು ಬಿಡಿಎಗೆ ನೇಮಕಾತಿ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಆದರೆ ತಾಂತ್ರಿಕ ತೊಂದರೆ ಕಾರಣ ನೀಡಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಹೊರಗಿಟ್ಟಿದ್ದಾರೆ. ಆದರೆ ಸುಧಾಕರ್ ಹೇಳುವ ಪ್ರಕಾರ, ತಾಂತ್ರಿಕ ತೊಂದರೆಗಳೇನು ಆಗಿರಲಿಲ್ಲ. ಇದು ದುರುದ್ದೇಶಪೂರ್ವಕವಾಗಿ ರಾಜಕೀಯ ಪ್ರೇರಿತ ಕ್ರಮವಾಗಿದೆ. ಒಕ್ಕಲಿಗ ನಾಯಕರು ಮೇಲೆ ಬರುವುದು ಜೆಡಿಎಸ್ ನವರಿಗೆ ಇಷ್ಟವಿಲ್ಲ. ಒಕ್ಕಲಿಗ ಮತಗಳೇ ಅವರ ವೋಟ್ ಬ್ಯಾಂಕ್ ಎಂದು ಕಿಡಿಕಾರಿದ್ದಾರೆ.

ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ನನಗೆ ಗೊತ್ತಿಲ್ಲ. ಅವರ ಜೊತೆ ಚರ್ಚಿಸಿ ನನ್ನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು. ಕಾಂಗ್ರೆಸ್ ನ ರಮೇಶ್ ಜಾರಕಿಹೊಳಿ ಕೂಡ ಇದೇ ರೀತಿಯ ಬೆದರಿಕೆ ಹಾಕಿದ್ದರಲ್ಲವೇ ಎಂದಾಗ, ಎಲ್ಲದಕ್ಕೂ ಸಮಯ ತೆಗೆದುಕೊಳ್ಳುತ್ತದೆ, ರಾಜಕೀಯದಲ್ಲಿ ಪ್ರತಿ ಕ್ರಿಯೆ ಮತ್ತು ಪ್ರಕ್ರಿಯೆಗಳಿಗೆ ಸಮಯ ಹಿಡಿಯುತ್ತದೆ, ರಮೇಶ್ ಅವರ ಪ್ರಯತ್ನ ವಿಫಲವಾಗಿದೆ ಅಥವಾ ಸುಧಾಕರ್ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೇವಲ 15 ದಿನಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com