ಬೆಂಗಳೂರು: ಬಿಜೆಪಿಯ 104 ಶಾಸಕರು ಹರಿಯಾಣದ ಗುರುಗ್ರಾಮದ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿರುವುದು ಕಾಂಗ್ರೆಸ್ ನಲ್ಲಿ ಆಪರೇಷನ್ ಕಮಲದ ತಳಮಳ ಸೃಷ್ಟಿಸಿದ್ದರೂ, ಪಕ್ಷದ ಎಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ನಮ್ಮ ಶಾಸಕರು ನಮ್ಮೊಂದಿಗೆಯೇ ಇದ್ದಾರೆ. ಕ್ಷೇತ್ರದ ಜನರಿಗೆ ನಾವು ಉತ್ತರ ಕೊಡುತ್ತೇವೆ. ಅವರು ಯಾವುದೇ ಕೆಟ್ಟ ರಾಜಕೀಯ ಮಾಡುವುದಿಲ್ಲ. ಮಹಾಘಟಬಂಧನ ಬಗ್ಗೆ ದೇಶದಲ್ಲಿ ಬಿಜೆಪಿ ಹೈಪ್ ಕ್ರಿಯೆಟ್ ಮಾಡಲು ಯತ್ನಿಸುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮಾತನಾಡಿ, ಪಕ್ಷದಲ್ಲಿ ತಾನೂ ಚೆನ್ನಾಗಿದ್ದೇನೆ. ಇತರ ಯಾವುದೇ ಪಕ್ಷದವರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ 104 ಶಾಸಕರು ಹರಿಯಾಣದ ಗುರುಗ್ರಾಮ್ ನಲ್ಲಿ ವಾಸ್ತವ್ಯೂ ಹೂಡಿದ್ದರೆ, ಮತ್ತೆ ಕೆಲವರು ಕಾಂಗ್ರೆಸ್ ಶಾಸಕರು ನಿನ್ನೆಯಿಂದ ಮುಂಬೈನ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿದ್ದು, ಆಪರೇಷನ್ ಕಮಲದ ಅನುಮಾನ ಮೂಡುತ್ತಿದೆ.
ಈ ಬೆಳವಣಿಗೆ ಕುರಿತು ನಿನ್ನೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಇದೆಲ್ಲಾ ಸುಳ್ಳು ವದಂತಿ. ಕುಮಾರಸ್ವಾಮಿ ಅವರೇ ಬಿಜೆಪಿ ಶಾಸಕರಿಗೆ ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡುವ ಮೂಲಕ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ . ಒಂದೆರೆಡು ದಿನ ಇಲ್ಲಿದ್ದು, ನಂತರ ಬೆಂಗಳೂರಿಗೆ ಬರುವುದಾಗಿ ಹೇಳಿಕೆ ನೀಡಿದ್ದರು.
Advertisement