ಮುಂಬೈ: ಇಲ್ಲಿ ನಾವು ಒಟ್ಟು 10 ಶಾಸಕರಿದ್ದೇವೆ. ಸೋಮವಾರ ಇನ್ನು ಮೂವರು ಶಾಸಕರು ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಬಂಡಾಯ ಶಾಸಕ ಎಸ್ಟಿ ಸೋಮಶೇಖರ್ ಅವರು ಭಾನುವಾರ ಹೇಳಿದ್ದಾರೆ.
ಇಂದು ರಾತ್ರಿ ಮುಂಬೈನ ಸೋಫಿಟೆಲ್ ಹೋಟೆಲ್ನಲ್ಲಿ ರಾಜೀನಾಮೆ ನೀಡಿದ ಅತೃಪ್ತ ಶಾಸಕರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸೋಮಶೇಖರ್ ಅವರು. ನಾವು ಇಲ್ಲಿ 10 ಶಾಸಕರಿದ್ದು, ರಾಮಲಿಂಗಾರೆಡ್ಡಿ, ಆನಂದ್ ಸಿಂಗ್ ಹಾಗೂ ಮುನಿರತ್ನ ಅವರು ನಾಳೆ ಆಗಮಿಸಲಿದ್ದಾರೆ. ಒಟ್ಟು 13 ಶಾಸಕರು ಒಟ್ಟಾಗಿ ಇದ್ದೇವೆ. ರಾಜೀನಾಮೆ ಹಿಂದಕ್ಕೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವ ಪ್ರಶ್ನೆಯೇ ಬರುವುದಿಲ್ಲ ಮತ್ತು ಬೆಂಗಳೂರಿಗೂ ವಾಪಸ್ ಹೋಗುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್ ಅವರು, ಸಿಎಂ ಬದಲಾವಣೆ ಬಗ್ಗೆ ನಾವು ಬೇಡಿಕೆ ಮುಂದಿಟ್ಟಿಲ್ಲ. ಇಂಥವರನ್ನು ಸಿಎಂ ಮಾಡಿ ಎಂಬ ಬೇಡಿಕೆಯೂ ಇಟ್ಟಿಲ್ಲ ಎಂದರು.
ಈ ವೇಳೆ ಎಚ್ ವಿಶ್ವನಾಥ್, ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ್, ಬಿ.ಸಿ. ಪಾಟೀಲ್ ಹಾಜರಿದ್ದರು.
ಈ ಮಧ್ಯೆ ಇಂದು ಸಂಜೆ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.