'ಏದುಸಿರು ಬಿಡುತ್ತಾ ಸ್ಪೀಕರ್ ಕಚೇರಿಗೆ ಓಡೋಡಿ ಬಂದ ಅತೃಪ್ತ ಶಾಸಕ ಬೈರತಿ ಬಸವರಾಜ್ - ವಿಡಿಯೋ
ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಂಬೈನಿಂದ ತರಾತುರಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ
ಬೆಂಗಳೂರು: ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಂಬೈನಿಂದ ತರಾತುರಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ
ಮುಂಬೈನಿಂದ ವಿಶೇಷ ವಿಮಾನದ ಮೂಲಕ ಹೆಚ್ ಎಎಲ್ ಗೆ ನಂತರ ಬಸ್ ಮೂಲಕ ವಿಧಾನಸೌಧಕ್ಕೆ ಅತೃಪ್ತ ಶಾಸಕರು ಆಗಮಿಸಿದರು. ಬಸ್ ವಿಧಾನಸೌಧದ ಹತ್ತಿರ ಬರುವಷ್ಟರಲ್ಲಿ 6 ಗಂಟೆ ಮುಗಿದಿದ್ದರಿಂದ ಮೊದಲಿಗೆ ಕೆಆರ್ ಪುರಂ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್ ಏದುಸಿರು ಬಿಡುತ್ತಾ ಸ್ಪೀಕರ್ ಕಚೇರಿಯತ್ತ ಓಡೋಡಿ ಬಂದರು.
ನಂತರ ಇನ್ನಿತರ ಶಾಸಕರಾದ ಎಸ್. ಟಿ. ಸೋಮಶೇಖರ್, ರಮೇಶ್ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಹೆಚ್ . ವಿಶ್ವನಾಥ್ ಮತ್ತಿತರ ಶಾಸಕರು ವಿಧಾನಸೌಧಕ್ಕೆ ಆಗಮಿಸಿ, ಸ್ಪೀಕರ್ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಸ್ಪೀಕರ್ ಕೈಗೊಳ್ಳುವ ತೀರ್ಮಾನ ತೀವ್ರ ಕುತೂಹಲ ಕೆರಳಿಸಿದೆ.
ಈ ಮಧ್ಯೆ ನಾಳೆಯಿಂದ ಆರಂಭವಾಗಲಿರುವ ಅಧಿವೇಶನದ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ರಾಜ್ಯದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ವಿಫ್ ಜಾರಿಗೊಳಿಸಿದ್ದಾರೆ.
ಹಣಕಾಸು ವಿಧೇಯಕ ಸೇರಿದಂತೆ ಮತ್ತಿತರ ಮಹತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುವುದರಿಂದ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು, ಇಲ್ಲದಿದ್ದರೆ ಪಕ್ಷದ್ರೋಹಿ ಕಾನೂನು ಪ್ರಕಾರ ಅನರ್ಹಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.