ಬೆಂಗಳೂರು: ಬಿಜೆಪಿ ಕಡೆಯಿಂದ ತಮಗೆ 30 ಕೋಟಿ ರು. ಹಣದ ಆಮಿಷ ಒಡ್ಡಲಾಗಿತ್ತು ಎಂಬ ಕೋಲಾರ ಶಾಸಕ ಶ್ರೀನಿವಾಸಗೌಡ ಅವರ ಆರೋಪ ವಿಧಾನಸಭೆಯಲ್ಲಿಂದು ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ವಿಶ್ವಾಸಮತ ಯಾಚನೆಗೂ ಮುನ್ನ ನಡೆದ ಚರ್ಚೆಯ ವೇಳೆ ಮಾತನಾಡಿದ ಶ್ರೀನಿವಾಸಗೌಡ, ತಾವು ಶಾಸಕತ್ವಕ್ಕೆ ರಾಜಿನಾಮೆ ನೀಡಲು ಬಿಜೆಪಿ ಕಡೆಯಿಂದ ಹಣದ ಆಮಿಷ ಒಡ್ಡಲಾಗಿತ್ತು. ಯಲಹಂಕ ಶಾಸಕ ವಿಶ್ವನಾಥ್ ಮತ್ತು ಸಿ.ಪಿ.ಯೋಗೀಶ್ವರ್ ತಮ್ಮ ಮನೆಗೆ ಐದು ಕೋಟಿ ರೂ.ನೊಂದಿಗೆ ಬಂದಿದ್ದರು. ಆದರೆ ಇದನ್ನು ತಿರಸ್ಕರಿಸಿ ವಾಪಸ್ ಕಳುಹಿಸಿದ್ದೇನೆ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್, ವಿನಾ ಕಾರಣ ತಮ್ಮ ವಿರುದ್ದ ಆರೋಪ ಮಾಡುತ್ತಿರುವ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ, ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.