ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿರುವಂತೆ ಮಧ್ಯಂತರ ಚುನಾವಣೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆಯಿಂದ ರಾಜ್ಯದ ಹಿತಾಸಕ್ತಿ ಬರುತ್ತದೆ ಬಿಜೆಪಿ ಸರ್ಕಾರ ಬಂದರೆ ಎಲ್ಲದಕ್ಕೂ ಅಂತ್ಯ ಬೀಳುತ್ತದೆ ಎಂದರು.
ಬಿಜೆಪಿ ಸದನದಲ್ಲಿ ಪ್ರಜಾತಂತ್ರಕ್ಕೆ ಗೌರವ ಕೊಟ್ಟು ನಡೆದುಕೊಳ್ಳುತ್ತಿದೆ. ಮೈತ್ರಿ ಪಕ್ಷಗಳಿಗೆ ಬಹುಮತ ಇಲ್ಲ ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ.ಕಾಂಗ್ರೆಸ್ -ಜೆಡಿಎಸ್ ಶಾಸಕರ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿಯಲಿದೆ.ನಾಳೆ ಸುಪ್ರೀಂಕೋರ್ಟ್ ನ್ಯಾಯದ ಪರ ತೀರ್ಪು ಕೊಡಲಿದೆ ಅನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಾಳೆ ವಿಶ್ವಾಸಮತಯಾಚಿಸದಿದ್ದರೆ ಬಿಜೆಪಿ ಮುಂದೆ ಹಲವು ಮಾರ್ಗಗಳಿವೆ. ಸಾಂವಿಧಾನಿಕವಾಗಿ ಹೋರಾಟ ಮಾಡುತ್ತೇವೆ ರಾಜ್ಯಪಾಲರು, ರಾಷ್ಟ್ರಪತಿ, ಸುಪ್ರೀಂಕೋರ್ಟ್ ಕಡೆ ಗಮನ ಕೊಡುತ್ತೇವೆ ಎಂದು ತಿಳಿಸಿದರು.
ರಾಷ್ಟ್ರಪತಿ ಆಳ್ವಿಕೆ ಇದ್ರೂ ಕುದುರೆ ವ್ಯಾಪಾರ ನಿಲ್ಲಲ್ಲ ಆದ್ದರಿಂದ ಈ ಎಲ್ಲವೂ ಅಂತ್ಯಗೊಳ್ಳಲು ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಬರ, ರೈತರ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಸದಾನಂದಗೌಡ ಹೇಳಿದರು.