ವಿಶ್ವಾಸ ಮತ ಗೆದ್ದ ಬಿ.ಎಸ್ ಯಡಿಯೂರಪ್ಪ: ಸರ್ಕಾರ ಆರು ತಿಂಗಳು ಸೇಫ್!

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸಮತಕ್ಕೆ ಜಯ ದೊರಕಿದೆ. ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ...
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ ಎಸ್ ಯಡಿಯೂರಪ್ಪ ಅವರು 15ನೇ ವಿಧಾನಸಭೆಯಲ್ಲಿ ಎರಡನೇ ಬಾರಿಗೆ ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯದಲ್ಲಿ ಸರ್ಕಾರಕ್ಕೆ ಇರುವ ಬಹುಮತವನ್ನು ಸಾಬೀತುಪಡಿಸಿದ್ದಾರೆ.
ಈ ಮೂಲಕ ಯಡಿಯೂರಪ್ಪ ಅವರ ಸರ್ಕಾರಕ್ಕೆ ಬಹುಮತ ಪ್ರಾಪ್ತಿಯಾಗಿದ್ದು, ಸಧ್ಯಕ್ಕೆ ಆರು ತಿಂಗಳ ಕಾಲ ಸರ್ಕಾರಕ್ಕೆ ಯಾವುದೇ ಆಪತ್ತು ಇಲ್ಲದಂತಾಗಿದೆ.  ಇಂದು ಸದನ ಆರಂಭವಾದ ನಂತರ ಸ್ಪೀಕರ್ ರಮೇಶ್ ಕುಮಾರ್ ಅವರ ಸೂಚನೆ ಮೇರೆಗೆ ಪ್ರಸಕ್ತ ವಿಧಾನಸಭೆ ಅವಧಿಯಲ್ಲಿ ಎರಡನೇ ಬಾರಿಗೆ ಒಂದು ಸಾಲಿನ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದರು. ಬಳಿಕ ಧ್ವನಿಮತದ ಮೂಲಕ ನಿರ್ಣಯಕ್ಕೆ ಅನುಮೋದನೆ ದೊರೆಯಿತು.
ಈ ಮುನ್ನ 2018ರ ಮೇ ನಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ್ದರು. ಆಗ ನಿರ್ಣಯದ ಮತದಾನಕ್ಕೂ ಮುನ್ನವೇ ವಿಧಾನಸಭೆಯಿಂದ ನೇರವಾಗಿ ರಾಜಭವನಕ್ಕೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ತಾವು ತಮ್ಮ ಆಡಳಿತಾವಧಿಯಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಕುಮಾರ ಸ್ವಾಮಿ ಅವರುಗಳು ಸಹ ಮುಖ್ಯಮಂತ್ರಿಗಳಾಗಿದ್ದು ಅವರು ಸೇಡಿನ ರಾಜಕಾರಣ ಮಾಡಿಲ್ಲ. ಇದೇ ರೀತಿ ನಮ್ಮ ಸರ್ಕಾರವೂ ಸೇಡಿನ‌ ರಾಜಕೀಯ ಮಾಡುವುದಿಲ್ಲ. ಫರ್ಗೆಟ್ ಅಂಡ್ ಫರ್ ಗೀವ್ (ಮರೆತುಬಿಡು ಮತ್ತು ಕ್ಷಮಿಸಿ ಬಿಡು) ಎನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.
ನಾಡದೇವತೆ ಚಾಮುಂಡೇಶ್ವರಿ, ಅಂಬೇಡ್ಕರ್ ಅವರನ್ನು ನೆನೆದ ಯಡಿಯೂರಪ್ಪ, ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಆಡಳಿತ ವ್ಯವಸ್ಥೆಯನ್ನು ಸರಿ ದಾರಿಗೆ ತರುವುದು ತಮ್ಮ ಮೂಲ ಉದ್ದೇಶವಾಗಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡಲಾಗುವುದು ಎಂದರು.
ತಾವು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಕೂಡಲ ಕೂಡಲೇ ರೈತರ ‌ನೆರವಿಗೆ ಧಾವಿಸಿದ್ದು, ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದಲೂ ರೈತರ ಖಾತೆಗೆ ನಾಲ್ಕು ಸಾವಿರ ರೂ ನೀಡಲು ಮೊದಲ ಸಚಿವ ಸಂಪುಟದಲ್ಲೇ ತೀರ್ಮಾನ ತೆಗೆದುಕೊಂಡಿದ್ದೇವೆ. ನೇಕಾರರ 100 ಕೋಟಿ ರೂ ಸಾಲ ಮನ್ನಾ ಮಾಡಿದ್ದೇವೆ. ಉತ್ತಮ ಆಡಳಿತ ನೀಡಲು ಪ್ರತಿಪಕ್ಷಗಳು ಸಹಕಾರ‌ ನೀಡಬೇಕು ಎಂದು ಕೋರಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಅವರು ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಮಾತನಾಡಿದ ನಂತರ, ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಹೆಚ್ಚಿನ ಚರ್ಚೆ ನಡೆಯುವ ಅಗತ್ಯವಿಲ್ಲ. ಯಾರಿಗೂ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಬಳಿಕ ಯಡಿಯೂರಪ್ಪ ಅವರು ಮಂಡಿಸಿದ  ವಿಶ್ವಾಸಮತ ನಿರ್ಣಯವನ್ನು ಸ್ಪೀಕರ್ ಅವರು ಮತಕ್ಕೆ ಹಾಕಿದರು. ಸದನ ಧ್ವನಿಮತದ ಮೂಲಕ ನಿರ್ಣಯಕ್ಕೆ ಅನುಮೋದನೆ ದೊರೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com