ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ರಾಜ್ಯ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತೊ ಗೊತ್ತಿಲ್ಲ, ರಾಜಕಾರಣದಲ್ಲಿ ಏಳು ಬೀಳು ಇದ್ದೇ ಇರುತ್ತದೆ, ಸರ್ಕಾರ ಉಳಿಸುವುದು ಬಿಡುವುದು ಕಾಂಗ್ರೆಸ್ ನಾಯಕರ ಕೈಯ್ಯಲ್ಲಿದೆ, ನನ್ನ ಜೊತೆ ಇದ್ದವರೆಲ್ಲ ಬಿಟ್ಟು ಹೋದರು, ಆದರರು ನಾನು ಧೃತಿ ಗೆಡದೇ ಮುಂದೆ ಬಂದಿದ್ದೇನೆ, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಹೈ ಕಮಾಂಡ್ ಶಕ್ತಿ ಕಳೆದು ಕೊಂಡಿದೆ, ಆತುರ ಬಿದ್ದು ಕಾಂಗ್ರೆಸ್ ನಾಯಕರು ಸರ್ಕಾರ ರಚನೆಗೆ ಮುಂದೆ ಬಂದರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಹಿನ್ನೆಲೆಯಲ್ಲಿ ಹಿಂದೆ-ಮುಂದೆ ಯೋಚಿಸದೇ ನಿಮ್ಮ ಮಗನನ್ನ ಸಿಎಂ ಮಾಡಿ ಎಂದು ಹೇಳಿದರು. 3/1 ನಿಯಮದಲ್ಲೂ ಅಧಿಕಾರ ಹಂಚಿಕೆ ಎಂದು ಹೇಳಿದರು, ಆದರೆ ನಮ್ಮ ಒಂದು ಸಚಿವ ಸ್ಥಾನವನ್ನು ಅವರೇ ಕಿತ್ತುಕೊಂಡಿದ್ದಾರೆ, ಈ ಬಗ್ಗೆ ನಾನು ಎಲ್ಲಾದರೂ ಮಾತನಾಡಿದ್ದೇನಾ, ಎಲ್ಲಾ ನೋವು ಸಹಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.