ಹುಬ್ಬಳ್ಳಿ: ಪದೇ ಪದೇ ದಲಿತ ಮುಖ್ಯಮಂತ್ರಿ ಹೆಸರು ಪ್ರಸ್ತಾಪ ಮಾಡಿ ತಮಗೆ ಅಪಮಾನ ಮಾಡಬೇಡಿ ಎಂದು ಸ್ವಪಕ್ಷೀಯರಿಗೆ ಮತ್ತು ಮಿತ್ರ ಪಕ್ಷದ ನಾಯಕರಿಗೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಯವಾಗಿಯೇ ಚಾಟಿ ಬೀಸಿದ್ದಾರೆ.
ಇಂದು ಹುಬ್ಬಳ್ಳಿ ಖಾಸಗಿ ಹೋಟೆಲ್ ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಬರುತ್ತವೆ. ನಂತರ ನಾನು ಈ ಬಗ್ಗೆ ಕೇಳಲ್ಲ, ಅವರು ಈ ಬಗ್ಗೆ ಹೇಳುವುದಿಲ್ಲ ಎಂದು ಪ್ರತಿ ಹಂತದಲ್ಲೂ ಅಸಮಾಧಾನ ಹೊರಹಾಕಿದರು.
ಉಮೇಶ್ ಜಾಧವ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ನಾನು ಹಾಗೂ ಧರ್ಮಸಿಂಗ್. ತಮ್ಮನ್ನು ಸೋಲಿಸಲು ಮೋದಿ ಸೇರಿ ಬಿಜೆಪಿಯ ಕೆಲವು ನಾಯಕರು ಕುತಂತ್ರ ಮಾಡಿದ್ದಾರೆ. ಆದರೆ ಎಂದಿಗೂ ಅದು ಫಲಿಸುವುದಿಲ್ಲ. ಸಂಸತ್ತಿನಲ್ಲಿ ಬೇರೆಯವರ ರೀತಿ ನಾನು ನಿದ್ರೆ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಕುಂದಗೋಳ, ಚಿಂಚೋಳಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಕೆಲಸ ನೋಡಿ ಜನರು ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.