ಹುಬ್ಬಳ್ಳಿ: ಪಕ್ಷದ ನಾಯಕರ ವರ್ತನೆಯಿಂದ ಜೆಡಿಎಸ್ ನ ಮೇಲ್ಮನೆ ಸದಸ್ಯರಿಗೆ ಬೇಸರವಾಗಿದ್ದು ನಿಜ. ಆದರೆ ಈಗ ನಮ್ಮ ಅಸಮಾಧಾನ ಬಗೆಹರಿದಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿನ 11 ಜನ ಮೇಲ್ಮನೆ ಸದಸ್ಯರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಅಸಮಾಧಾನವಿತ್ತು. ನಮ್ಮ ಅಸಮಾಧಾನ ಬಹುತೇಕ ಶಮನವಾಗಿದೆ. ನಮ್ಮ ಬೇಡಿಕೆಗಳು ದೇವೇಗೌಡರಿಗೂ ಮನವರಿಕೆಯಾಗಿದೆ. ಹೀಗಾಗಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮೊನ್ನೆಯಷ್ಟೇ ಈ ಕುರಿತು ನಾವೆಲ್ಲ ಒಂದಾಗಿ ಸಭೆ ನಡೆಸಿದ ವಿಷಯವನ್ನು ದೇವೇಗೌಡರಿಗೆ ತಿಳಿಸಿದ್ದೇವೆ. ಈಗ ನಮ್ಮದು ಯಾವುದೇ ಬೇಡಿಕೆ ಇಲ್ಲ. ನಮ್ಮ ಸರ್ಕಾರ ಈಗ ಅಧಿಕಾರದಲ್ಲಿಲ್ಲ. ಹೀಗಾಗಿ ನಮಗೆ ಸಚಿವ ಸ್ಥಾನ ನೀಡಿ ಇಲ್ಲವೇ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಿ ಎಂದು ಕೇಳಲು ಸಾಧ್ಯವಿಲ್ಲ. ಸದ್ಯ ದೇವೇಗೌಡರು ನಮ್ಮ ಬಗ್ಗೆ ಕಾಳಜಿ ವಹಿಸಿದ್ದಾರೆ. ಒಂದು ವೇಳೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತೆ ಸಭೆ ನಡೆಸಿ ಒಗ್ಗಟ್ಟಾಗಿ ಇರುತ್ತೇವೆ ಎಂದರು.
ಪಕ್ಷದ ಮುಖಂಡರು ಏನೇ ತೀರ್ಮಾನ ಕೈಗೊಳ್ಳುವ ಮೊದಲು ಎಲ್ಲರೊಂದಿಗೂ ಚರ್ಚಿಸಬೇಕು. ಆಗ ಮಾತ್ರ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ನಮ್ಮೊಂದಿಗೆ ಚರ್ಚಿಸದೇ ನಿರ್ಧರಿಸಿಬಿಟ್ಟರೆ ಮಾಧ್ಯಮಗಳಿಗೆ ಏನು ಪ್ರತಿಕ್ರಿಯಿಸಬೇಕು ಎಂದು ಪ್ರಶ್ನಿಸಿದರು. ಅಂತೆಯೇ ಪುಟ್ಟಣ್ಣ ಬಗ್ಗೆ ಎಚ್.ಡಿ. ರೇವಣ್ಣ ನೀಡಿದ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಮೊದಮೊದಲು ಕೆಲವರನ್ನು ಅಟ್ಟಕ್ಕೆ ಏರಿಸಿಬಿಡುತ್ತಾರೆ. ಅವರು ಹೇಳಿದ್ದೇ ವೇದವಾಕ್ಯ ಎನ್ನುವಂತೆ ನಡೆದುಕೊಳ್ಳುತ್ತಾರೆ. ನಂತರ ನಿರ್ಲಕ್ಷ್ಯ ಮಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಇದೇ 6 ಅಥವಾ 7ರಂದು ಸಭೆ ನಡೆಸಿ ಪಕ್ಷದೊಳಗಿನ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದ್ದಾರೆ. ಪಕ್ಷದ ಜೀವಂತಿಕೆ ಉಳಿಯಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆ. ಚಾಕೊಲಟ್ ಹಾಗೂ ಪೆಪ್ಪರ್ಮೆಂಟ್ನಂಥ ಬೇಡಿಕೆಗಳು ನಮ್ಮವು, ವಿಧಾನ ಪರಿಷತ್ ಸದಸ್ಯರನ್ನು ನಿಷ್ಕಾಳಜಿ ಮಾಡಿದ್ದಾರೆ ಎನ್ನುವ ಅಸಮಾಧಾನ ಎಲ್ಲರಲ್ಲಿಯೂ ಇತ್ತು. ಈಗ ಕಾಳಜಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿದೇಶ ಪ್ರವಾಸಕ್ಕೆ ಹೋಗಲ್ಲ
ಇದೇ ವೇಳೆ ರಾಜ್ಯದಲ್ಲಿ ಬರ ಮತ್ತು ಪ್ರವಾಹ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ತಾವು ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. 'ವಿದೇಶಕ್ಕೆ ಯಾರು ಹೋಗುತ್ತಾರೊ; ಬಿಡುತ್ತಾರೊ ನನಗಂತೂ ಗೊತ್ತಿಲ್ಲ. ವಿಧಾನ ಪರಿಷತ್ನ ಸದಸ್ಯರಂತೂ ಹೋಗುವುದಿಲ್ಲ. ಹೋಗಲು ಇದು ಸೂಕ್ತ ಸಮಯವೂ ಅಲ್ಲ.
Advertisement