ಇತ್ತ ದೇವೇಗೌಡರು ಅತೃಪ್ತ ಶಾಸಕರ ಸಭೆ ಕರೆದರೆ, ಅತ್ತ ಲಂಡನ್ ಗೆ ಹಾರಲು ಸಜ್ಜಾಗಿದ್ದಾರೆ ಪುತ್ರ ಕುಮಾರಸ್ವಾಮಿ!

ಮಲೇಷಿಯಾ ಪ್ರವಾಸ ಯೋಜನೆ ವಿಫಲವಾದ ನಂತರ ಪುತ್ರ ಲಂಡನ್ ಕಡೆ ಮುಖ ಮಾಡಿದ್ದಾರೆ. ಜೆಡಿಎಸ್ ನಾಯಕರನ್ನು ಒಲಿಸಲು ಪುತ್ರ ಹೆಚ್ ಡಿ ಕುಮಾರಸ್ವಾಮಿ ಶಾಸಕರನ್ನು ಮಲೇಷಿಯಾಕ್ಕೆ ಕರೆದುಕೊಂಡು ಹೋಗುವ ಯೋಜನೆಯಲ್ಲಿದ್ದರು.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು:ಮಲೇಷಿಯಾ ಪ್ರವಾಸ ಯೋಜನೆ ವಿಫಲವಾದ ನಂತರ ಪುತ್ರ ಲಂಡನ್ ಕಡೆ ಮುಖ ಮಾಡಿದ್ದಾರೆ. ಜೆಡಿಎಸ್ ನಾಯಕರನ್ನು ಒಲಿಸಲು ಪುತ್ರ ಹೆಚ್ ಡಿ ಕುಮಾರಸ್ವಾಮಿ ಶಾಸಕರನ್ನು ಮಲೇಷಿಯಾಕ್ಕೆ ಕರೆದುಕೊಂಡು ಹೋಗುವ ಯೋಜನೆಯಲ್ಲಿದ್ದರು. ಅದಕ್ಕೆ ಹೆಚ್ ಡಿ ದೇವೇಗೌಡರು ಅಡ್ಡಬಂದು ಪ್ರವಾಸ ಎಲ್ಲ ಏನೂ ಬೇಡ, ನವೆಂಬರ್ 6ಕ್ಕೆ ಸಭೆ ಕರಿ, ಭಿನ್ನಾಭಿಪ್ರಾಯ ಬಗೆಹರಿಸೋಣ ಎಂದು ಮಗ ಕುಮಾರಸ್ವಾಮಿಗೆ ಬುದ್ದಿಮಾತು ಹೇಳಿದ್ದಾರೆ. ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರ ನಡುವಿನ ಅಸಮಾಧಾನ ಶಮನಗೊಳಿಸಲು ಕರೆದಿರುವ ಸಭೆ ಇದಾಗಿದೆ.


ಆದರೆ ಹೆಚ್ ಡಿ ಕುಮಾರಸ್ವಾಮಿಯವರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ತಮ್ಮ ಪುತ್ರನ ಮುಂದಿನ ಸಿನಿಮಾ ಪ್ರಾಜೆಕ್ಟ್  ಮಾತುಕತೆಗಾಗಿ ನಾಳೆ ಲಂಡನ್ ಗೆ ಹಾರುತ್ತಿದ್ದಾರೆ. 


ನಾವು ಮಲೇಷಿಯಾಕ್ಕೆ ಹೋಗುತ್ತಿಲ್ಲ. ನನ್ನ ಮಗ ನಿಖಿಲ್ ಜೊತೆ ಲಂಡನ್ ಗೆ ಸಿನಿಮಾ ಪ್ರಾಜೆಕ್ಟ್ ಮಾತುಕತೆಗಾಗಿ ಹೋಗುತ್ತಿದ್ದೇನೆ. ದೇವೇಗೌಡರು ನವೆಂಬರ್ 6ರಂದು ಕರೆದಿರುವ ಪಕ್ಷದ ಸಭೆಯಲ್ಲಿ ನಾನು ಭಾಗವಹಿಸುತ್ತಿಲ್ಲ. ನಾಳೆ ಬೆಂಗಳೂರಿನಿಂದ ಹೊರಟು ನವೆಂಬರ್ 8ರಂದು ವಾಪಸ್ಸಾಗುತ್ತೇನೆ ಎಂದಿದ್ದಾರೆ ಹೆಚ್ ಡಿ ಕುಮಾರಸ್ವಾಮಿ.


ಎರಡು ದಿನಗಳ ಹಿಂದೆ ಅತೃಪ್ತ ಜೆಡಿಎಸ್ ಶಾಸಕರು ದೇವೇಗೌಡರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಆಗ ಅವರಿಗೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ದೊಡ್ಡಗೌಡರು ಮಾತು ಕೊಟ್ಟಿದ್ದರು. ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರ ಸಭೆಯನ್ನು ಮುಂದಿನ ವಾರ ಕರೆದು ತಮ್ಮ ಮಗನನ್ನು ಕೂರಿಸಿ ಮಾತುಕತೆಯಾಡಿ ಭಿನ್ನಾಭಿಪ್ರಾಯ ಬಗೆಹರಿಸುವ ಯೋಜನೆಯಲ್ಲಿದ್ದರು. ಆದರೆ ಈ ಎಲ್ಲಾ ಯೋಜನೆಗಳನ್ನು ಪುತ್ರ ಕುಮಾರಸ್ವಾಮಿ ತಲೆಕೆಳಗೆ ಮಾಡುವಂತಿದೆ.


ಈ ಬಗ್ಗೆ ಕುಮಾರಸ್ವಾಮಿಯವರನ್ನು ಕೇಳಿದಾಗ, ನಾನು ಯಾವತ್ತೂ ತಂದೆಯ ನಿರ್ಧಾರ ವಿರುದ್ಧ ಹೋಗುವುದೇ ಇಲ್ಲ. ನಾನು ಒಂದೇ ಒಂದು ಸಲ ತಂದೆಯ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಅದು 2006ರಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದಾಗ ಮಾತ್ರ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com