ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರವನ್ನೂ ಟಾರ್ಗೇಟ್ ಮಾಡಿತಾ ಬಿಜೆಪಿ ಸರ್ಕಾರ?

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರ ವ್ಯಾಪ್ತಿಯ ಮಲಪ್ರಭಾ ನದಿಗೆ ಉಂಟಾಗಿದ್ದ ನೆರೆಗೆ ನದಿ ತೀರದ ಗ್ರಾಮಗಳ ಜನತೆ ಬದುಕು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದರೂ ಬಿಜೆಪಿ ಸರ್ಕಾರ ಮಾತ್ರ ಇತ್ತ ಕಡೆ ಎಳ್ಳಷ್ಟೂ ಗಮನ ಹರಿಸುತ್ತಿಲ್ಲ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರ ವ್ಯಾಪ್ತಿಯ ಮಲಪ್ರಭಾ ನದಿಗೆ ಉಂಟಾಗಿದ್ದ ನೆರೆಗೆ ನದಿ ತೀರದ ಗ್ರಾಮಗಳ ಜನತೆ ಬದುಕು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದರೂ ಬಿಜೆಪಿ ಸರ್ಕಾರ ಮಾತ್ರ ಇತ್ತ ಕಡೆ ಎಳ್ಳಷ್ಟೂ ಗಮನ ಹರಿಸುತ್ತಿಲ್ಲ.

ಬಾದಾಮಿ ತಾಲೂಕಿನ ಕರ್ಲಕೊಪ್ಪದಿಂದ ಐಹೊಳೆವರೆಗಿನ ನದಿ ತೀರದ ಗ್ರಾಮಗಳು ಜಲಾವೃತಗೊಂಡು ಅಪಾರ ಹಾನಿ ಅನುಭವಿಸಿ ಪಡಬಾರದ ಕಷ್ಟ ಪಡುತ್ತಿವೆ. ಸರ್ಕಾರ ಮಾತ್ರ ಈ ಭಾಗದ ನೆರೆ ಸಂತ್ರಸ್ತರ ಬಗ್ಗೆ ಗಮನ ಹರಿಸುತ್ತಿಲ್ಲ.
ಇದೇ ವೇಳೆ ಜಿಲ್ಲೆಯಲ್ಲಿನ ಘಟಪ್ರಭ ನದಿಗೂ ಪ್ರವಾಹ ಬಂದು ಮುಧೋಳ ನಗರ ಸೇರಿದಂತೆ ನದಿ ತೀರದ ಗ್ರಾಮಗಳು ಜಲಾವೃತಗೊಂಡಿದ್ದವು. ಹಾಗೇ ಕೃಷ್ಣ ನದಿಯಲ್ಲೂ ಪ್ರವಾಹ ಉಕ್ಕೇರಿತ್ತು. ಒಟ್ಟಾರೆ ಪ್ರವಾಹದಿದ ಜಿಲ್ಲೆಯಲ್ಲಿ ಎಷ್ಟೆಲ್ಲ ಹಾನಿ ಉಂಟಾಗಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಸಂಪುಟದ ಸಚಿವರು ಮಾತ್ರ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆಂದು ಬಂದವರು ಎಲ್ಲೆಡೆ ಪರಿಶೀಲನೆ ನಡೆಸುವ ಮೂಲಕ  ಜಿಲ್ಲಾದ್ಯಂತ ಇರುವ ಪ್ರವಾಹ ಸಂತ್ರಸ್ತರನ್ನು ಸಮಾಧಾಗೊಳಿಸಬೇಕಿತ್ತು. ಆದರೆ ನಡೆಯುತ್ತಿರುವುದೇ ಬೇರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಮತ್ತು ವಸತಿ ಸಚಿವ ವಿ.ಸೋಮಣ್ಣ ಪ್ರವಾಹ ಸ್ಥಿತಿ ಪರಿಶೀಲನೆಗೆ ಜಿಲ್ಲೆಗೆ ಆಮಿಸಿದರಾದರೂ ಘಟಪ್ರಭ ನದಿ ತೀರದ ಪ್ರದೇಶಗಳಿಗೆ ಭೇಟಿ, ಅಲ್ಲಿಂದ ನೇರವಾಗಿ ಹುನಗುಂದ ತಾಲೂಕಿಗೆ ಭೇಟಿ ನೀಡುತ್ತಿರುವುದು ಇತರರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ.

ಏತನ್ಮಧ್ಯೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ತಾವು ಪ್ರತಿನಿಧಿಸುತ್ತಿರುವ ಮುಧೋಳ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ನೆರೆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಜತೆಗೆ ಜಿಲ್ಲೆಗೆ ಬರುವ ಸಚಿವರನ್ನು ತಮ್ಮ ಕ್ಷೇತ್ರಕ್ಕಷ್ಟೆ ಕರೆದುಕೊಂಡು ಹೊಗುತ್ತಿದ್ದಾರೆ ಎನ್ನುವ ಗುಲ್ಲು ಸಹಜವಾಗಿಯೇ ಎದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಹೀಗೆಕೆ ಮಾಡುತ್ತಿದ್ದಾರೆ ಎನ್ನುವುದು ಜಿಲ್ಲೆಯ ನೆರೆ ಸಂತ್ರಸ್ತರ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ.

ಬಾದಾಮಿ ವಿಧಾನಸಭೆ ಕ್ಷೇತ್ರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಎನ್ನುವ ಏಕೈಕ ಕಾರಣಕ್ಕೆ ಆ ಪ್ರದೇಶವನ್ನು ಬಿಜೆಪಿ ಬೇಕು ಅಂತಲೇ ನಿರ್ಲಕ್ಷ್ಯ ಮಾಡುತ್ತಿದೆಯಾ ಎನ್ನುವ ಅನುಮಾನ ಅಲ್ಲಿನ ನೆರೆ ಸಂತ್ರಸ್ತರನ್ನು ಕಾಡಲಾರಂಭಿಸಿದೆ. 

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿಕೆ, ಸ್ಥಳಾಂತರದAತಹ ಕಾರ್ಯಗಳು ಇನ್ನೂ ಆಗಬೇಕಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಜಿಲ್ಲೆಯ ಎಲ್ಲ ಭಾಗಗಳಲ್ಲಿನ ನೆರೆ ಸಂತ್ರಸ್ತರನ್ನು ಸಹಾನುಭೂತಿಯಿಂದ ಸಮಾನವಾಗಿ  ಕಾಣಬೇಕಿದೆ. ತಾವು ಪ್ರತಿನಿಧಿಸುವ ಕ್ಷೇತ್ರವೊಂದಕ್ಕೆ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿಸದೇ ಇತರ ಪ್ರದೇಶಗಳಿಗೂ ಕರೆದುಕೊಂಡು ಹೋಗಿ ಅಲ್ಲಿನ ಪರಿಸ್ಥಿತಿ ಪರಿಶೀಲನೆಗೂ ಅನುವು ಮಾಡಿಕೊಡಬೇಕಿದೆ. ಇಲ್ಲದಿದ್ದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರೆ ಮುಂದೆ ನಿಂತು ನೆರೆ ಸಂತ್ರಸ್ತರಲ್ಲಿ ತಾರತಮ್ಯ ಮಾಡಿದಂತಾಗಲಿದೆ ಎನ್ನುವ ಮಾತು ವ್ಯಾಪಕವಾಗಿದೆ. ಈ ಮಾತನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇನ್ನಾದರೂ ಅಳಿಸಿ ಹಾಕುವ ಕೆಲಸ ಮಾಡಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com