ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಶತ್ರು ಅಲ್ಲ. ಅವರು ನಮ್ಮ ರಾಜಕೀಯ ಎದುರಾಳಿ. ರಾಜಕೀಯದ ಚದುರಂಗದಾಟದಲ್ಲಿ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ಈ ಮೂಲಕ ಬಿಜೆಪಿಯ ಬಗ್ಗೆ ಮೃದು ಧೋರಣೆ ಮಾತುಗಳನ್ನಾಡಿರುವ ದೇವೇಗೌಡ, ಚಾಣಕ್ಷ್ಯತನದ ಮೂಲಕ ಮತ್ತೊಮ್ಮೆ ಬಿಜೆಪಿ ನಾಯಕರ ಗಮನ ಸೆಳೆದಿದ್ದಾರೆ.
ಕೆಲವು ದಿನಗಳ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಯಡಿಯೂರಪ್ಪ ಸರ್ಕಾರ ಉರುಳಲು ಬಿಡುವುದಿಲ್ಲ ಎಂದಿದ್ದರು. ಮಗನ ಮಾತನ್ನು ಪುಷ್ಠೀಕರಿಸಿ ಮಂಗಳವಾರ ಮಾತನಾಡಿದ್ದ ದೇವೇಗೌಡ, ತಮ್ಮ ಗುರಿ ಪಕ್ಷ ಸಂಘಟನೆಯೇ ಹೊರತು ಯಡಿಯೂರಪ್ಪ ಅವರನ್ನು ಪದವಿಯಿಂದ ಕೆಳಗಿಳಿಸುವುದಲ್ಲ ಎಂದಿದ್ದರು. ಇದೀಗ ಯಡಿಯೂರಪ್ಪ ತಮ್ಮ ಶತ್ರು ಅಲ್ಲ ಎನ್ನುವ ಮೂಲಕ ಮತ್ತೊಮ್ಮೆ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.
ಇಂದು ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, ಯಡಿಯೂರಪ್ಪ ಏನು ನಮಗೆ ಶತ್ರು ಅಲ್ಲ. ಯಾವ ಸಂಧರ್ಭದಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯ ನಮಗೇನು ಆ ಜನ್ಮ ಶತ್ರುಗಳು ಅಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯವಾಗಿ ಮಾತಾಡಿರುತ್ತೇವೆ ಅಷ್ಟೆ. ಕಾಲ ಕಾಲಕ್ಕೆ ಏನೇನು ಆಗಬೇಕು ಆಗತ್ತೆ ಎಂದರು.
ಸಿಎಂ ಬಗ್ಗೆ ಮೃದು ಧೋರಣೆ ತೋರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, "ಯಡಿಯೂರಪ್ಪ ಹಾಗೂ ನನ್ನ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಯಡಿಯೂರಪ್ಪ ಅವರ ಹತ್ರ ಮಾತಡಬಾರದು ಅಂತ ಏನು ಇಲ್ಲ. ಆದರೆ ಮಾತನಾಡುವ ಸಂದರ್ಭ ಬಂದಿಲ್ಲ," ಎಂದರು.
Advertisement