ಬೆಂಗಳೂರು: ಕರ್ನಾಟಕದಲ್ಲಿ ಸಂವಿಧಾನ ವ್ಯವಸ್ಥೆಯನ್ನು ಉಳಿಸುವ ಬಗ್ಗೆ ಮನವಿ ಸಲ್ಲಿಸಲು ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಶಾಸಕಾಂಗ ನಾಯಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹದಿನೇಳು ಅನರ್ಹ ಶಾಸಕರ ವಿಚಾರವನ್ನು ಪ್ರಸ್ತಾಪಿಸಿ, ಮೈತ್ರಿ ಸರ್ಕಾರಪತನಗೊಳಿಸಿ ನಮ್ಮನ್ನು ನಂಬಿಬಂದವರನ್ನು ಕೈಬಿಡಬಾರದು ಎಂದು ಯಡಿಯೂರಪ್ಪ ನೀಡಿರುವ ಹೇಳಿಕೆಯ ಆಡಿಯೋ ವಿಡಿಯೋ ಬಗ್ಗೆ ದೂರು ನೀಡಲು ಕಾಲಾವಕಾಶ ಕೋರಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಕಾನೂನುಬಾಹಿರವಾಗಿ ಉರುಳಿಸಲಾಗಿದೆ. ಶಾಸಕರ ಕುದುರೆ ವ್ಯಾಪಾರ ನಡೆದಿದ್ದು ರಾಜ್ಯದಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಈ ಸಂಬಂಧ ಮನವಿ ಮಾಡಲು ಭೇಟಿಗೆ ಅವಕಾಶ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರಪತಿಗೆ ಸಿದ್ದರಾಮಯ್ಯ ನೀಡುತ್ತಿರುವ ದೂರಿನಲ್ಲಿ, ರಾಜ್ಯದಲ್ಲಿ ಸಂವಿಧಾನ ವಿರೋಧಿ ಸರ್ಕಾರ ಆಡಳಿತ ನಡೆಸಲಾಗುತ್ತಿದೆ. ಶಾಸಕರನ್ನು ಅಕ್ರಮವಾಗಿ ಸೆಳೆಯಲಾಗಿದೆ. ಕೆಲವರಿಗೆ ಹಣ, ಅಧಿಕಾರದ ಆಮಿಷ ಒಡ್ಡಲಾಗಿದೆ. ಇನ್ನೂ ಕೆಲವರಿಗೆ ಐಟಿ, ಇಡಿ ಮೂಲಕ ಬೆದರಿಕೆ ಮೂಲಕ ಬೆದಲಿರಸಲಾಗಿದೆ. ಆಡಿಯೋದಲ್ಲಿ ಕೇಂದ್ರ ಗೃಹ ಸಚಿವರ ಹೆಸರು ಪ್ರಸ್ತಾಪವಾಗಿದೆ. ಸಿಎಂ ಆಡಿಯೋದಲ್ಲೇ ಇದು ಸ್ಪಷ್ಟವಾಗಿದೆ ಎಂದು ದೂರು ನೀಡಲು ನಿರ್ಧರಿಸಲಾಗಿದೆ.
Advertisement