ಬೆಂಗಳೂರು: ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳ ತಲೆನೋವಾದರೇ ಕಾಂಗ್ರೆಸ್ ಗೆ ಪಕ್ಷದೊಳಗಿನ ನಾಯಕರ ಅಸಹಕಾರದ್ದೇ ದೊಡ್ಡ ಸಮಸ್ಯೆಯಾಗಿದೆ, ಈ ಅಸಹಕಾರ ಚಳುವಳಿಯಲ್ಲಿ ಹಲವು ಹಿರಿಯ ಮುಖಂಡರು ಭಾಗಿಯಾಗಿದ್ದಾರೆ.
ವಿರೋಧ ಪಕ್ಷದ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪ ಚುನಾವಣೆಯ 8 ಅಭ್ಯರ್ಥಿಗಳ ಪರ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ, ಆದರೆ ಯಾವ ಹಿರಿಯ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿಲ್ಲ, ಇದು ಹಲವು ಸಮಸ್ಯೆಗಳಿಗೆ ನಾಂದಿ ಹಾಡಿದಂತಾಗಿದೆ.ಮೊದಲ ಸುತ್ತಿನಲ್ಲಿ 8 ಅಭ್ಯರ್ಥಿಗಳು ಹಾಗೂ ಎರಡನೇ ಸುತ್ತಿನಲ್ಲಿ 7 ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಹೀಗಾಗಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ಪ್ರಚಾರದಿಂದ ದೂರ ಉಳಿಯಲಿದ್ದಾರೆ.
ಉಪ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದರೂ ಹಿರಿಯ ಕಾಂಗ್ರೆಸ್ ನಾಯಕರ ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ, ಇದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿಲ್ಲ ಏಕಪಕ್ಷೀಯ ನಿರ್ಧಾರ ಗಳೇ ತುಂಬಿವೆ ಎಂಬ ಸಂದೇಶ ರವಾನಿಸಿದ್ದು, ಪ್ರಚಾರದಿಂದ ದೂರ ಉಳಿದಿದ್ದಾರೆ. ಕೇವಲ ಸಿದ್ದರಾಮಯ್ಯ ಮತ್ತು ಗುಂಡೂರಾವ್ ಮಾತ್ರ ಉಪ ಸಮರದ ರಣಕಣದಲ್ಲಿದ್ದಾರೆ.
ಸಿದ್ದರಾಮಯ್ಯ ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು, ಬೇರೆ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ, ಈ ರೀತಿಯ ನಿರ್ಧಾರಗಳು ಜೆಡಿಎಸ್ ನಂತಹ ಪಕ್ಷಗಳಿಗೆ ಸರಿ ಹೊಂದುತ್ತದೆ ಕಾಂಗ್ರೆಸ್ ಗಲ್ಲ ಎಂದು ಹಾಲಿ ಕಾಂಗ್ರೆಸ್ ಸಂಸದರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಹಿರಿಯ ನಾಯಕರಾದ ಶ್ರೀನಿವಾಸ್ ಪ್ರಸಾದ್, ರೋಶನ್ ಬೇಗ್ ಮತ್ತು ಹಾಲಿ ಕಾಂಗ್ರೆಸ್ಸಿಗ ಕೆ.ಎಚ್. ಮುನಿಯಪ್ಪ ಅವರನ್ನು ಪಕ್ಷ ಹೇಗೆ ನಡೆಸಿಕೊಂಡಿದೆ ಎಂಬುದನ್ನು ನೋಡಿದ್ದೇವೆ, ಇವೆಲ್ಲ ಅನೇಕ ಜನರಿಗೆ ನೋವುಂಟು ಮಾಡಿದೆ.
ಉಪ ಚುನಾವಣೆ ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ, ಇಂದು ಕಾಂಗ್ರೆಸ್ ಪುನರುಜ್ಜೀವನದ ಪ್ರಶ್ನೆಯಾಗಿದೆ, ಸೋತರೆ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ಪಕ್ಷದ ಕೆಲವು ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ಇದು ಸಿದ್ದರಾಮಯ್ಯ ಅವರಿಗೂ ಕೂಡ ಅಗ್ನಿ ಪರೀಕ್ಷೆಯಾಗಿದೆ,. ವಿರೋಧ ಪಕ್ಷದ ನಾಯಕರಾಗಿರುವ ಕಾರಣ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಕಾಂಗ್ರೆಸ್ ನ 12 ಶಾಸಕರು ರಾಜಿನಾಮೆ ನೀಡಿರುವ ಕಾರಣ ಆ ಕ್ಷೇತ್ರಗಳಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು ಬರಬೇಕೆಂದು ಹೈಕಮಾಂಡ್ ಅಪೇಕ್ಷಿಸಿದೆ,
ನಿರೀಕ್ಷೆಗಿಂತ ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದರೂ ಅದು ಸರ್ಕಾರ ರಚಿಸಲು ಸಾಧ್ಯವಿಲ್ಲ, ಮತ್ತೆ ಜೆಡಿಎಸ್ ಕಡೆ ಮುಖ ಮಾಡಬೇಕಾಗುತ್ತದೆ, ಆದರೆ ಸಿದ್ದರಾಮಯ್ಯ ಅವರಿಗೆ ಇದರಲ್ಲಿ ಆಸಕ್ತಿಯಿಲ್ಲ, ಹೀಗಾಗಿ ವಿರೋಧ ಪಕ್ಷದ ನಾಯಕರಾಗಿಯೇ ಮುಂದುವರಿಯಲಿದ್ದಾರೆ,
ಲೋಕಸಭೆ ಚುನಾವಣೆ ವೇಳೆ ಇದೇ ತಂಡ ನಿರ್ಧಾರಗೊಳನನ್ನು ತೆಗೆದುಕೊಂಡಿತ್ತು, ಹೀಗಾಗಿ ಕೇವಲ ಒಂದು ಸೀಟು ಗೆದ್ದಿತ್ತು,. ಇದು ಜವಾಬ್ದಾರಿ ಹೊರುವ ಸಮಯವಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಮಾಜಿ ಸಂಸದ ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇದರ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗಿಲ್ಲ.
Advertisement