ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಮತ್ತೆ ಸದ್ದು ಮಾಡುತ್ತಿದ್ದು, ಈಗ ವಿವಾದಿತ ಸ್ವಾಮೀಜಿ ಜೊತೆಗಿನ ಡಿಕೆ ಶಿವಕುಮಾರ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್, ನಾನು ನಿತ್ಯಾನಂದ ಸ್ವಾಮಿ ಅವರನ್ನು ಒಂದು ವರ್ಷದ ಹಿಂದೆ ಭೇಟಿ ಮಾಡಿದ್ದೆ. ಚುನಾವಣೆಯ ಸಮಯದಲ್ಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ ವೇಳೆ ಕೆಲವು ನಿಮಿಷಗಳ ಕಾಲ ಅವರ ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.
ನಾವು ಹಲವು ದೇವ ಮಾನವರನ್ನು ಭೇಟಿ ಮಾಡುತ್ತೇವೆ. ನಿತ್ಯಾನಂದ ಸ್ವಾಮಿಯ ಆಶ್ರಮ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲೇ ಬರುತ್ತದೆ. ಆದರೆ, ಅವರ ವಿರುದ್ಧದ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇತ್ತೀಚಿಗೆ ನಾನು ಬಿಡದಿಯ ಆಶ್ರಯಕ್ಕೂ ಭೇಟಿ ನೀಡಿಲ್ಲ. ನಿತ್ಯಾನಂದ ಸ್ವಾಮೀಜಿಯವರನ್ನೂ ಭೇಟಿ ಮಾಡಿಲ್ಲ. ಈ ಫೋಟೋಗೆ ಸುಖಾಸುಮ್ಮನೆ ಬಣ್ಣ ಕಟ್ಟುವುದು, ಚರ್ಚೆ ಮಾಡುವುದು ತರವಲ್ಲ ಎಂದು ಡಿಕೆಶಿ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಡಿ.ಕೆ.ಶಿವಕುಮಾರ್ ಸ್ವತಃ ನಿತ್ಯಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಭೇಟಿ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಅದಕ್ಕೆಲ್ಲ ಡಿಕೆಶಿ ಇಂದು ಉತ್ತರ ಕೊಟ್ಟಿದ್ದಾರೆ.
Advertisement