ಬೆಂಗಳೂರು: ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರಿಗೆ ನನ್ನ ವಿರುದ್ಧ ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ ಅವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಆರೋಪಿಸಿದ್ದಾರೆ.
ಇಂದು ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ವ್ಯಾಪ್ತಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಶರತ್ ಅವರು, ಈ ಬಾರಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ನಾಗರಾಜ್ ಅವರಿಗೆ ನನ್ನ ವಿರುದ್ಧ ಬಳಸಿಕೊಳ್ಳಲು ಯಾವುದೇ ರೀತಿಯ ಅಸ್ತ್ರ ಸಿಗುತ್ತಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಮಿನಿ ಬಿಹಾರ್ ಎಂದು ಎಂಟಿಬಿ ನಾಗರಾಜ್ ಅವರು ಅಪಪ್ರಚಾರ ನಡೆಸಿದ್ದರು. ಮೊದಲು ಮಾರಾಟವಾಗಿದ್ದಾನೆ, ಡೀಲ್ ಆಗಿದ್ದಾನೆ, ಚೇರ್ಮನ್ ಬೋರ್ಡ್ ತಿರಸ್ಕರಿಸಿದರು ಎಂದೆಲ್ಲಾ ಅಪಪ್ರಚಾರ ಮಾಡುತ್ತಾ ಬಂದರು. ಆದರೆ ಯಾವುದಕ್ಕೂ ತಾಲೂಕಿನ ಜನತೆ ಒಪ್ಪದ ಸಂದರ್ಭದಲ್ಲಿ ಈಗ ಗೂಂಡಾ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರ ನಿರಂತರವಾಗಿ ಸಾಗಿದೆ ಎಂದರು.
ಈಗಾಗಲೇ ಕೆಲವು ಸಮೀಕ್ಷೆಗಳ ಪ್ರಕಾರ ಎಂ.ಟಿ.ಬಿ. ನಾಗರಾಜ್ ಅವರಿಗೆ ಸೋಲು ಖಚಿತ ಎಂಬ ಮಾಹಿತಿ ಇದೆ. ಈ ಆಧಾರದ ಮೇಲೆ ಹಾಗೂ ತಾಲೂಕಿನ ಮತದಾರರು ಆಮಿಷಗಳಿಗೆ ಒಳಗಾಗದೆ ಸ್ವಾಭಿಮಾನಿಗಳಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಲಿದ್ದಾರೆ. ಇದನ್ನು ಅರಿತ ಅವರು, ಈಗ ಈ ರೀತಿಯಾದ ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರೂ, ಈ ಚುನಾವಣೆಯಲ್ಲಿ ತಾಲೂಕಿನ ಮತದಾರರೇ ಇದಕ್ಕೆಲ್ಲಾ ಸರಿಯಾದ ಉತ್ತರ ನೀಡಲಿದ್ದಾರೆ. ಹೊಸಕೋಟೆ ತಾಲೂಕಿನ ಸ್ವಾಭಿಮಾನವನ್ನು ಎತ್ತಿ ಹಿಡಿಯಲಿದ್ದಾರೆ ಎಂದರು.
Advertisement