ಬೆಂಗಳೂರು: ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸತ್ತವರ ಮನೆಗೆ ಹೋದರೂ ಹೀ ಅಂತ ನಗುತ್ತಾ ಇರುತ್ತಾರೆ. ಅದಕ್ಕೆ ಸತ್ತವರ ಮನೆಗೆ ಅವರನ್ನು ಕರೆದುಕೊಂಡು ಹೋಗಬೇಡಿ ಎಂದು ನಾನೇ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅಪಹಾಸ್ಯ ಮಾಡಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಿದ್ದ ಅವರು, ಸದಾನಂದ ಗೌಡರು ಸತ್ತವರ ಮನೆಗೆ ಹೋಗಿ ,ಸತ್ತಿದ್ದಾರಾ ಅಂತ ನಗ್ತಾನೇ ಕೇಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ದೇವೇಗೌಡರು, ನಾನು ಇಲ್ಲದೇ ಇದ್ದಿದ್ದರೆ ಈ ಕ್ಷೇತ್ರದ ಅಭ್ಯರ್ಥಿ ಯಾವತ್ತೋ ಎನ್ಕೌಂಟರ್ ಆಗಿಬಿಡುತ್ತಿದ್ದರು. ಪೊಲೀಸರಿಂದ ಮಾತ್ರ ಅಲ್ಲ, ರೌಡಿಗಳಿಂದಲೂ ಇವರ ಎನ್ಕೌಂಟರ್ ಆಗತ್ತಾ ಇತ್ತು. ಇವರು ಬದಲಾಗುತ್ತಾರೆ ಎಂದು 2013ರಲ್ಲಿ ಒಂದು ಅವಕಾಶ ಕೊಟ್ಟೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕಣ್ಣೀರು ಹಾಕೋದು ನಮ್ಮ ಕುಟುಂಬದ ಪೇಟೆಂಟ್. ನಾವು ಬಡ ಕುಟುಂಬದಿಂದ ಬಂದವರು. ಬಿಜೆಪಿಯವರ ಹಾಗೆ ಚಿನ್ನದ ಚಮಚ ಇಟ್ಟುಕೊಂಡು ಬೆಳೆದಿಲ್ಲ. ಬಡವರನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ಬಿಜೆಪಿ ನಾಯಕರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ಅವರಿಗೆ ಕಣ್ಣೀರು ಬರಲ್ಲ ಎಂದು ಕುಮಾರಸ್ವಾಮಿ ತಮ್ಮ ಕಣ್ಣೀರಿಗೆ ವಿಶ್ಲೇಷಣೆ ನೀಡಿದರು.
ಸೋಮಣ್ಣ ಯಾರ ಯಾರ ಕಾಲಿಗೆ ಯಾವ್ಯಾವಾಗೆಲ್ಲಾ ಬಿದ್ದಿದ್ದಾರೆ ಎನ್ನೋದು ಗೊತ್ತಿದೆ. ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಜನತಾ ಬಜಾರ್ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡವರು ಸೋಮಣ್ಣ. ಈ ವಯಸ್ಸಿನಲ್ಲಿ ದೇವೇಗೌಡರು ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಿಮ್ಮ ಹಾಗೆ ಪಕ್ಷದಲ್ಲಿ ಬೆಳೆದು ಆ ಮೆಲೆ ಆ ಪಕ್ಷಕ್ಕೆ ದ್ರೋಹ ಮಾಡಿಲ್ಲ” ಎಂದು ಸೋಮಣ್ಣರನ್ನು ಹೆಚ್ಡಿಕೆ ಟೀಕಿಸಿದರು.
Advertisement