ಬೆಂಗಳೂರು: ಬಿಜೆಪಿಯಲ್ಲೀಗ ಆಯಾರಾಮ್ ನರೇಂದ್ರ ಮೋದಿ, ಗಯಾರಾಮ್ ಅಮಿತ್ ಷಾ. ಇನ್ನು ಕೆಲವು ದಿನಗಳಲ್ಲಿ ಈ ಆಯಾರಾಮ್ ಗಯಾರಾಮ್ರಿಗೆ ರಾಜ್ಯ ಸೇರಿದಂತೆ ದೇಶದ ಜನರು ತಕ್ಕ ಪಾಠ ಕಲಿಸುವುದು ಖಚಿತ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಆರಕ್ಕಿಂತ ಕಡಿಮೆ ಸ್ಥಾನ ಬಂದರೆ ಬಿಜೆಪಿ ಸರ್ಕಾರಕ್ಕೆ ತೊಂದರೆಯಾಗಲಿದೆ. ಆಪರೇಷನ್ಗೆ ಕಾಂಗ್ರೆಸ್ ಎಂದಿಗೂ ವಿರೋಧವೇ. 1985ರಲ್ಲಿ ಆಯಾರಾಮ್ ಗಯಾರಾಮ್ ಪದ್ಧತಿಗೆ ಕಡಿವಾಣ ಹಾಕಲು ಪಕ್ಷಾಂತರ ನೀತಿ ಕಾಯಿದೆ ತಂದರು. ಕಾಂಗ್ರೆಸ್ ಎಂದಿಗೂ ಸ್ಟ್ರೇಟ್ ಆಪರೇಷನ್ ಆಗಲಿ ರಿವರ್ಸ್ ಆಪರೇಷನ್ ಆಗಲಿ ಎಂದಿಗೂ ಮಾಡುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಆಯಾ ರಾಮ್ , ಅಮಿತ್ ಷಾ ಗಯಾರಾಮ್ ಎಂದು ಟೀಕಿಸಿದ ಅವರು, ಪಕ್ಷಾಂತರಕ್ಕೆ ಪ್ರೋತ್ಸಾಹಕ್ಕೆ ನೀಡುವ ನಾಯಕರಿವರು. ಮೋದಿ ಒಬ್ಬ ಒಳ್ಳೆಯ ಭಾಷಣಕಾರ ಮಾತ್ರವೇ ಹೊರತು ಒಳ್ಳೆಯ ಆಡಳಿತಗಾರನಲ್ಲ. ಅಮಿತ್ಷಾ ಏನೂ ಅಲ್ಲ. ಅವರ ಬಗ್ಗೆ ಒಳ್ಳೆಯ ಜನಾಭಿಪ್ರಾಯವಿಲ್ಲ ಎಂದು ಹೇಳಿದರು.
ಆಪರೇಷನ್ ಕಮಲದ ಹಣೆಬರಹ ಏನು ಎನ್ನುವುದು ಡಿ.9 ರ ಬಳಿಕ ಗೊತ್ತಾಗಲಿದೆ. ಬಿಜೆಪಿಯವರು ಮಧ್ಯಂತರ ಚುನಾವಣೆ ಆಗಲು ಬಿಡುವುದಿಲ್ಲ. ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿ ಅರ್ಧಕ್ಕರ್ಧ ಬಿದ್ದು ಹೋಗಲಿದೆ. ಹೀಗಾಗಿ ಸೋಲುವ ಜನವಿರೋಧಿ ಭಯ ಬಿಜೆಪಿಗೆ ಇದೆ. ಹೀಗಾಗಿ ಮಧ್ಯಂತರ ಚುನಾವಣೆ ನಡೆಸಲು ಬಿಜೆಪಿ ಬಿಡುವುದಿಲ್ಲ ಎಂದರು.
Advertisement