ಮೈಸೂರು: ಪ್ರವಾಹ ಪರಿಹಾರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಮಾತನಾಡಲು ಧೈರ್ಯವಿಲ್ಲ ಎಂದಾದಲ್ಲಿ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ ನಾವು ಮಾತನಾಡುತ್ತೇವೆಂದು ಹೇಳಿದ್ದ ವಿರೋಧ ಪಕ್ಷಗಳ ನಾಯಕರ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿಗಳು, ನೆರೆ ಪರಿಹಾರಕ್ಕೆ ಯಾರ ಪ್ರಭಾವವೂ ಬೇಕಿಲ್ಲ. ಯಾವ ಪಕ್ಷದವರೂ ಗೊಂಬಲ ಉಂಟು ಮಾಡುವ ಅಗತ್ಯವಿಲ್ಲ ಶೀಘ್ರದಲ್ಲಿಯೇ ಕೇಂದ್ರ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಬಳಿ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲ ಎಂದಾದಲ್ಲಿ ಸರ್ವಪಕ್ಷಗಳ ನಿಯೋಗದೊಂದಿಗೆ ತೆರಳಿ ನಾನು ಮಾತನಾಡುತ್ತೇನೆಂದು ಹೇಳಿದ್ದರು. ಇದೇ ರೀತಿ ಹೆಚ್.ಡಿ.ರೇವಣ್ಣ ಅವರೂ ಮಾತನಾಡಿದ್ದರು.
ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಅವರು ತಿರುಗೇಟು ನೀಡಿದ್ದಾರೆ. ನೆರೆ ಪರಿಹಾರ ವಿಚಾರದಲ್ಲಿ ಯಾವ ಪಕ್ಷದವರೂ ಗೊಂದಲ ಉಂಟು ಮಾಡುವ ಅಗತ್ಯವಿಲ್ಲ ಯಾರೂ ದೆಹಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿ ಬುದ್ಧಿವಂತರಾಗಿದ್ದು, ಅವರಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿದಿದೆ. ಶೀಘ್ರದಲ್ಲಿಯೇ ಪರಿಹಾರ ಘೋಷಣೆ ಮಾಡುತ್ತಾರೆ. ನಾನು ಅಮಿತ್ ಶಾ ಅವರಿಗೆ ಎಲ್ಲವನ್ನೂ ಮನವರಿಕೆ ಮಾಡಿ ಬಂದಿದ್ದೇನೆಂದು ತಿಳಿಸಿದ್ದಾರೆ.
Advertisement