ಬೆಂಗಳೂರು: ಪ್ರವಾಹ ಪರಿಹಾರ ಕುರಿತಂತೆ ರಾಜ್ಯ ಸರ್ಕಾರ ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದು, ಇದಕ್ಕೆ ತೀವ್ರವಾಗಿ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ಸದನದಿಂದ ಹೊರ ನಡೆದ ಪ್ರಸಂಗ ನಡೆಯಿತು.
ಸದನದಲ್ಲಿ ನೆರೆ ಚರ್ಚೆ ಮುಂದುವರೆಸಿದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಭೀಕರ ಪ್ರವಾಹ ಬಂದು 70 ದಿನಗಳೇ ಕಳೆದಿದೆ. 20 ಲಕ್ಷಕ್ಕೂ ಹೆಚ್ಚು ಎಕರೆಯಷ್ಟು ಬೆಳೆ ಹಾನಿಯಾಗಿದೆ. ಸಾವಿರಾರು ಊರು ಮುಳುಗಡೆಯಾಗಿವೆ. ಈವರೆಗೂ ಅಲ್ಲಿನ ರೈತರಿಗೆ ಒಂದು ರುಪಾಯಿ ಬೆಳೆ ಪರಿಹಾರ ಕೊಟ್ಟಿಲ್ಲ. ಶಾಲಾ ಮಕ್ಕಳಿಗೆ ನೀಡಿದ್ದ 7.31 ಲಕ್ಷ ಪಠ್ಯ ಪುಸ್ತಕಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ಆ ಮಕ್ಕಳಿಗೆ ಇದೂವರೆಗೂ ಮತ್ತೊಂದು ಸೆಟ್ ಪಠ್ಯ ಪುಸ್ತಕ ನೀಡಲು ನಿಮ್ಮ ಕೈಯಲ್ಲಿ ಆಗಿಲ್ಲ. ನೆರೆ ಪ್ರದೇಶಗಳಿಗೆ ಹೋದಾಗ ಮುಖ್ಯಮಂತ್ರಿಗಳಿಗೆ, ಸಚಿವರು, ಶಾಸಕರು, ಸಂಸದರಿಗೆ ಜನಘೇರಾವ್ ಹಾಕುತ್ತಿದ್ದಾರೆ. ಸರ್ಕಾರ ಇನ್ನೂ ಜೀವಂತವಾಗಿದೆಯೇ? ಈವರೆಗೆ ರೂ.2940ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿರುವುದಾಗಿ ಹೇಳುತ್ತೀರಲ್ಲಾ, ಆ ಹಣ ಯಾರಿಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ನೆರೆ ಪ್ರದೇಶದ ಕೃಷಿ ಭೂಮಿಗೆ ಹೆಚ್ಚುವರಿ ಹಣ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಎನ್'ಡಿಆರ್'ಎಫ್ ನಿಯಮಗಳ ಪ್ರಕಾರ ಕೃಷಿ ಭೂಮಿಗೆ ರೂ.6,800 ಕೋಟಿ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಅದನ್ನು ಸಡಿಗೊಳಿಸಿ ರೂ.10 ಸಾವಿರ ಹೆಚ್ಚುವರಿಯಾಗಿ ಸೇರಿಸಿ ಒಟ್ಟು ರೂ.16,800ಗಳನ್ನು ಕೊಡಲಾಗುವುದು. ಅಲ್ಲದೆ, ತೋಟಗಾರಿಕೆ ಬೆಳೆಗಳಿಗೆ ರೂ.13,500 ಗಳನ್ನು ನೀಡಬೇಕು ಎಂಬ ನಿಯಮವಿದ್ದು, ರೂ.10 ಸಾವಿರ ಹೆಚ್ಚವರಿ ಸೇರಿಸಿ ರೂ.23,500ಗಳನ್ನು ನೀಡಲಾಗುವುದು. ಶಾಶ್ವತ ನೀರಾವರಿ ಪ್ರದೇಶದಲ್ಲಿ ರೂ.18 ಸಾವಿರ ಪರಿಹಾರ ನೀಡಬೇಕು. ಆದರೆ, ರೂ.10 ಸಾವಿರಗಳನ್ನು ಹೆಚ್ಚುವರಿಯಾಗಿ ಸೇರಿಸಿ ರೂ.28 ಸಾವಿರಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮಳೆಗಾಲದಲ್ಲಿ ಪದೇ ಪದೇ ಮುಳುಗಡೆ ಆಗುತ್ತಿರುವ ಗ್ರಾಮಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ, ಇದಕ್ಕೆ ಗ್ರಾಮಸ್ಥರ ಒಪ್ಪಿಗೆ ಅಗತ್ಯವಿದೆ. ಒಪ್ಪಿಗೆ ಸಿಕ್ಕಲ್ಲಿ ಎತ್ತರದ ಪ್ರದೇಶದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನೆರೆಯಲ್ಲಿ ಮಳೆ ಕಳೆದುಕೊಂಡಿದ್ದು, ಅಲ್ಲಿ ನೆಲೆಸಲು ಸಾಧ್ಯವೇ ಇಲ್ಲದ ಕುಟುಂಬಗಳಿಗೆ ಎನ್'ಡಿಆರ್'ಎಫ್ ನಿಯಮಗಳ ಪ್ರಕಾರ ರೂ.95 ಸಾವಿರ ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಆದರೆ, ಅದನ್ನು ಮೀರಿ ಪ್ರತಿ ಮನೆಗೆ ರೂ.5 ಲಕ್ಷ ಪರಿಹಾರ ನೀಡಲು ಮುಂದಾಗಿದ್ದೇವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಪರಿಹಾರ ನೀಡುತ್ತಿದ್ದೇವೆ. ಅಲ್ಲದೆ, ಈಗಾಗಲೇ ಮನೆ ನಿರ್ಮಾಣದ ಅಡಿಪಾಯ ಕಾಮಗಾರಿಗೆ ರೂ.1 ಲಕ್ಷ ಬಿಡುಗಡೆ ಮಾಡಿದ್ದೇವೆ. ಕುಸಿದಿರುವ ಎ ಮತ್ತು ಬಿ ವರ್ಗದ ಮನೆಗಳಿಗೆ ರೂ.5 ಲಕ್ಷ ಹಾಗೂ ಸಿ ಕೆಟಗಿರಿ ಮನೆಗಳಿಗೆ ರೂ.50 ಸಾವಿರಗಳನ್ನು ನೀಡಲು ಸೂಚನೆ ನೀಡಿದ್ದೇನೆಂದು ವಿವರಿಸಿದರು.
Advertisement