ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೇ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆರೆ ಪರಿಹಾರ ಬಿಡುಗಡೆ ಮಾಡುವಲ್ಲಿ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ವಿರೋಧ ಪಕ್ಷಗಳು ಶುಕ್ರವಾರ ತೀವ್ರವಾಗಿ ಕಿಡಿಕಾರಿವೆ.
ಆಗಸ್ಟ್ ತಿಂಗಳಿನಲ್ಲಿಯೇ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಪ್ರವಾಹದಿಂದ 2.5 ಲಕ್ಷ ಮನೆಗಳು ನಾಶಗೊಂಡಿವೆ. ಸಾವಿರಾರು ಸೇತುವೆಗಳು ರಸ್ತೆಗಳು ನಾಶಗೊಂಡಿವೆ. ಭಾರೀ ಮಳೆಯಿಂದಾಗಿ ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಆದರೂ ಕೇಂದ್ರ ಸರ್ಕಾರದಿಂದಾಗಲೀ, ಪ್ರಧಾನಿ ಮೋದಿ ಬಾಯಿಯಿಂದಾಗಲೀ ಒಂದು ಪದ ಕೂಡ ಹೊರ ಬಂದಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತೀವ್ರವಾಗಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಎಂಎಲ್'ಸಲಿ ಬೋಸ್ ರಾಜು ಮಾತನಾಡಿ, ಪ್ರವಾಹ ಎದುರಾಗಿ 60 ದಿನಗಳು ಕಳೆದುವೆ. ಸೌಜನ್ಯಕ್ಕಾದರೂ ಪ್ರಧಾನಿ ಮೋದಿ ಪ್ರವಾಹದ ಕುರಿತು ಒಂದು ಮಾತನ್ನು ಆಡಿಲ್ಲ. ಮೌನವನ್ನು ಮುಂದುವರೆಸಿರುವ ಮೋದಿಯವರು ಯಾವುದೇ ಹೇಳಿಕೆಗಳನ್ನೂ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.
2005-2009ರಲ್ಲಿ ರಾಜ್ಯದಲ್ಲಿ ಪ್ರವಾಹ ಎದುರಾದಾಗ ಆಗಿನ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಅವರು ವೈಮಾನಿಕ ಸಮೀಕ್ಷೆಗಳನ್ನು ನಡೆಸಿ, ಪರಿಹಾರ ಬಿಡುಗಡೆ ಮಾಡಿದ್ದರು. ಪ್ರಧಾನಿ ಮೋದಿಯವರಿಗೆ ಬೇರೆ ರಾಜ್ಯಗಳಿಗೆ ಭೇಟಿ ನೀಡಲು ಸಮಯವಿದೆ. ಅವರಿಗೆ ನೀಡಲು ಹಣವಿದೆ. ಆದರೆ, ಕರ್ನಾಟಕದ ಕುರಿತು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸಮಿತಿ ಪ್ರವಾಹ ಕುರಿತು ಸಮೀಕ್ಷೆ ನಡೆಸಿದೆ. ನಮ್ಮ ಅಂದಾಜಿನ ಪ್ರಕಾರ 1 ಲಕ್ಷ ಕೋಟಿ ನಷ್ಟ ಎದುರಾಗಿದೆ. ಈ ಕುರಿತ ವರದಿಯನ್ನು ಸಂಬಂಧಪಟ್ಟ ನಾಯಕರಿಗೆ ಸಲ್ಲಿಸಿದ್ದೇವೆ. ಪ್ರಧಾನಿ ಮೋದಿ, ರಾಜ್ಯಪಾಲ ವಜುಭಾಯ್ ವಾಲಾ ಅವರಿಗೂ ನೀಡಿದ್ದೇವೆ. ಈ ಸಂಬಂಧ ಮೋದಿಯವರ ಬಳಿ ಚರ್ಚೆ ನಡೆಸಲು ನಮ್ಮ ನಾಯಕರು ಕಾಲಾವಕಾಶ ಕೇಳಿದ್ದಾರೆ. ಆದರೆ, ಇದಕ್ಕೆ ಅವರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಪ್ರವಾಹ ಕುರಿತು ಟ್ವೀಟ್ ಮಾತ್ರ ಮಾಡುತ್ತಾರೆ. ರಾಜ್ಯದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಟಿಸುತ್ತಿದ್ದೇವೆ. ಆದರೆ, ಕೇಂದ್ರ ಮಾತ್ರ ಮೌನವಾಗಿದೆ. ಮೋದಿಯವರು ಕರ್ನಾಟಕ ಕುರಿತು ಮಲತಾಯಿ ಧೋರಣೆ ತೋರುತ್ತಿದ್ದಾರೆಂದು ಕಾಂಗ್ರೆಸ್ ನಾಯಕ ಪ್ರಕಾಶ್ ರಾಥೋಡ್ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಯವರನ್ನು ಸಮರ್ಥಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು, ಯುಪಿಎ ಸರ್ಕಾರ 10 ವರ್ಷಗಳ ಅಧಿಕಾರದಲ್ಲಿ 2014-19ರ ಅಂತರದಲ್ಲಿ 4,138 ಕೋಟಿ ಬಿಡುಗಡೆ ಮಾಡಿದೆ. ಆದರೆ, ಎನ್'ಡಿಎ ಸರ್ಕಾರ 7,300 ಕೋಟಿ ಬಿಡುಗಡೆ ಮಾಡಿದೆ. ಯಾವುದು ದೊಡ್ಡದು? ಎಂದು ಪ್ರಶ್ನಿಸಿದ್ದಾರೆ.
Advertisement