ಹೈಕಮಾಂಡ್‌ಗೆ ಯಡಿಯೂರಪ್ಪ ಒಲ್ಲದ ಸಿಎಂ: ಡಿಸೆಂಬರ್‌ಗೆ ಸರ್ಕಾರ ಪತನ - ಸಿದ್ದರಾಮಯ್ಯ

ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಗೆ ಒಲ್ಲದ ಮುಖ್ಯಮಂತ್ರಿ, ಅವರೊಬ್ಬ  ಅನ್ ವಾಂಟೆಡ್ ಸಿ.ಎಂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಇಷ್ಟವಿರಲಿಲ್ಲ...
ಯಡಿಯೂರಪ್ಪ-ಸಿದ್ದರಾಮಯ್ಯ
ಯಡಿಯೂರಪ್ಪ-ಸಿದ್ದರಾಮಯ್ಯ

ಮಂಗಳೂರು: ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಗೆ ಒಲ್ಲದ ಮುಖ್ಯಮಂತ್ರಿ, ಅವರೊಬ್ಬ  ಅನ್ ವಾಂಟೆಡ್ ಸಿ.ಎಂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಇಷ್ಟವಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರಕಾರ ಡಿಸೆಂಬರ್- ಜನವರಿ ವೇಳೆಗೆ ಪತನಗೊಳ್ಳಲಿದೆ.  ಸ್ವತಃ ಯಡಿಯೂರಪ್ಪ ಅವರೇ ತಾನು ತಂತಿಯ ಮೇಲೆ ನಡೆಯುತ್ತೀದ್ದೇನೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಬೇಕಿರಲಿಲ್ಲ, ಈಗ ಸುಮ್ನೆ ಸ್ವಲ್ಪ ದಿನ ನೋಡುತ್ತಾರೆ ಅಷ್ಟೇ,  ಏನಿದ್ದರೂ ಸರಕಾರದ ರಿಮೋಟ್ ಕಂಟ್ರೋಲ್ ಸಂತೋಷ್ ಅವರ ಕೈಯಲ್ಲಿ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಈಗ ಸಂತೋಷ್ ಅವರ ಕೈಗೊಂಬೆಯಾಗಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. 

ಇನ್ನೂ ನಳಿನ್ ಕುಮಾರ್ ಗೆ ರಾಜ್ಯದ ಆರ್ಥಿಕ ಸ್ಥಿತಿ ಗತಿ ಏನೂ ಗೊತ್ತಿಲ್ಲ, ಅಷ್ಟು ಮಾತ್ರವಲ್ಲ ರಾಜ್ಯದಲ್ಲಿ ಎಷ್ಟು  ಜಿಲ್ಲೆ ಇದೆ ಅನ್ನೋದು ಗೊತ್ತಿಲ್ಲ. .ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ನಳಿನ್ ಕುಮಾರ್ ನೀಡಿದ ಹೇಳಿಕೆಗೆ ತದ್ವಿರುದ್ಧವಾಗಿ ಯಡಿಯೂರಪ್ಪ ಮಾತನಾಡುತ್ತಿದ್ದಾರೆ. ಇನ್ನೂ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ನಳಿನ್ ಕುಮಾರ್ ಗೆ ಮಾಹಿತಿ ಇಲ್ಲ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಪಕ್ಷಕ್ಕೂ ಅವರ ಸರಕಾರಕ್ಕೂ ತಾಳ ಮೇಳ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ನರೇಂದ್ರ ಮೋದಿ ಕೇವಲ ಸುಳ್ಳು ಹೇಳಿಕೆಯಿಂದಲೇ ದಿನ ದೂಡುತ್ತಿದ್ದಾರೆ. ದೇಶದ ಪ್ರಗತಿ ಬಗ್ಗೆ ಮೋದಿ ಮಾತನಾಡುವುದಿಲ್ಲ. ದೇಶದ ಆರ್ಥಿಕ ಹಿಂಜರಿತದ ಬಗ್ಗೆ,  ಉದ್ಯೋಗ ಕಡಿತವಾಗುತ್ತಿರುವ ಬಗ್ಗೆ,  ಮೋದಿ ಬಾಯಿ ಬಿಡುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಮಾರಂಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ  , ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com